ಶಕ್ತಿನಗರ: ಇಲ್ಲಿನ ಗಡಿಭಾಗದ ಕೃಷ್ಣಾ ಗ್ರಾಮದಲ್ಲಿ ಶನಿವಾರ ಸದ್ಗುರು ಕ್ಷೀರಲಿಂಗೇಶ್ವರ ಸಂಸ್ಥಾನ ಕಮರಿ ಮಠದ ರಥೋತ್ಸವ ಭಕ್ತರ ಸಡಗರ ಸಂಭ್ರಮದ ಮಧ್ಯೆ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಸಂಪ್ರದಾಯದಂತೆ ಜಾತ್ರಾ ವಿಶೇಷ ಪೂಜಾ ಕಾರ್ಯಗಳು ನಡೆ ದವು. ಉತ್ಸವ ಮೂರ್ತಿಯನ್ನು ಪ್ರಭಾವಳಿ ಯಲ್ಲಿ ಅಲಂಕರಿಸಿ, ಕೂಡ್ಲಿಗಿಯ ಡೊಳ್ಳು ಮತ್ತು ವಿಶೇಷ ಚಂಡಿಮೇಳ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.
ರಥದಲ್ಲಿ ವಿರಾಜಮಾನವಾದ ಬಳಿಕ ಸಂಜೆ 6 ಗಂಟೆಗೆ ಸದ್ಗುರು ಕ್ಷೀರಲಿಂಗೇಶ್ವರ ಸಂಸ್ಥಾನ ಕಮರಿ ಮಠದ ರಥೋತ್ಸವದ ವೃಷಭಲಿಂಗೇಶ್ವರ ಸ್ವಾಮೀಜಿ ಬಂತನಾಳ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಯಿತು.
ರಥಕ್ಕೆ ವೈವಿದ್ಯಮಯ ಹೂಗಳು ಹಾಗೂ ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು. ಕಳಸ ಮತ್ತು ಛತ್ರಿ ಅರೋಹಣ ಮಾಡಲಾಯಿತು. ಕ್ಷೀರಲಿಂಗೇಶ್ವರ ಸಂಸ್ಥಾನ ಕಮರಿ ಮಠದ ಉತ್ಸವ ಮೂರ್ತಿಯೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕ ಅವರು ರಥದಲ್ಲಿ ಅಸೀನರಾಗುತ್ತಿದ್ದಂತೆ ನೆರೆದಿದ್ದ ಭಕ್ತರು ದೇವರ ಜಯ ಘೋಷ ಕೂಗಿ, ರಥ ಎಳೆದು ಭಕ್ತಿ ಭಾವ ಮೆರೆದರು.
ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿ ವಿವಿಧ ರಾಜ್ಯಗಳಿಂದ ಭಕ್ತರು, ನೈವೇದ್ಯ ಕಾಯಿ ಕರ್ಪೂರ ಅರ್ಪಿಸಿ ದೇವರ ದರ್ಶನ ಪಡೆದರು.
ರಥೋತ್ಸವದಲ್ಲಿ ತೆಲಂಗಾಣದ ಮಖ್ತಲ್ ಶಾಸಕ ಚಿಟ್ಟಂ ರಾಮ ಮೋಹನರೆಡ್ಡಿ, ಬಿಜೆಪಿ ಮುಖಂಡ ಬಿ. ಕೊಂಡಯ್ಯ, ವೃಷಭಲಿಂಗೇಶ್ವರ ಸ್ವಾಮೀಜಿ ಬಂತನಾಳ, ಚೇಗುಂಟ ಕ್ಷೀರಲಿಂಗೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿ, ಗ್ರಾಮದ ಮುಖಂಡರು ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.