ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವದ ನಿಮಿತ್ತ ಮಠದ ಪೀಠಾಧಿಪತಿ ಸುಬುಧೇಂಧ್ರ ತೀರ್ಥರು, ಮಠದ ಮುಂಭಾಗ ಶನಿವಾರ ಧ್ವಜಾರೋಹಣ ನೆರವೇರಿಸಿ ಒಂದುವಾರ ನಡೆಯುವ ಸಪ್ತರಾತ್ರೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಮಠದಲ್ಲಿ ಪೂರ್ಣಕುಂಭ, ವಾದ್ಯಮೇಳಗಳು, ಮಂತ್ರಘೋಷಗಳು ಮೊಳಗಿದವು. ಶ್ರೀಕಾರಹಾಕಿದ ನಂತರ ಶ್ರೀಮಠದ ಆವರಣದಲ್ಲಿ ಧ್ವಜಾರೋಹಣ, ಗೋವು, ಅಶ್ವ,ಗಜ, ಲಕ್ಷ್ಮೀ ಹಾಗೂ ಧಾನ್ಯ ಪೂಜೆಗಳನ್ನು ಸ್ವಾಮೀಜಿ ನೆರವೇರಿಸಿದರು.
ಪ್ರತಿನಿತ್ಯ ಬೆಳಗಿನ ಜಾವ ರಾಯರ ಮೂಲ ವೃಂದಾವನದ ನೈರ್ಮಲ್ಯ ವಿಸರ್ಜನೆ, ವಿಶೇಷ ಪೂಜೆಗಳು, ಮಹಾಸಂಸ್ಥಾನ ಪ್ರತಿಮೆಗಳ ಪೂಜೆ, ಪಂಚಾಭಿಷೇಕ, ಪ್ರಾಕಾರ ರಥೋತ್ಸವ ನಡೆಯಲಿವೆ.
ಆಗಸ್ಟ್ 23 ರಂದು ಪೂರ್ವರಾಧನೆ, 24 ರಂದು ಮಧ್ಯಾರಾಧನೆ ಹಾಗೂ 25 ರಂದು ಉತ್ತಾರಾಧನೆ ನಡೆಯುವುದು. ಕೋವಿಡ್ ನಿಯಮ ಅನುಸರಿಸಿಕೊಂಡು ಭಕ್ತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.