ರಾಯಚೂರು: ಜಿಲ್ಲೆಯ ಕಲಾವಿದರು ರಾಜ್ಯ ಮತ್ತು ರಾಷ್ಠ್ರಮಟ್ಟದಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಬೇಕಾಗಿದೆ. ಅದಕ್ಕೆ ಬೇಕಾದ ಸಹಾಯ ಸಹಕಾರ ನೀಡಲಾಗುವುದು ಎಂದು ಸುಪ್ರೀಂಕೋರ್ಟ್ ವಕೀಲ ದೇವಣ್ಣ ನಾಯಕ ಹೇಳಿದರು.
ನಗರದ ಶ್ರೀಸಾಯಿ ಮಂದಿರದ ಆವರಣದಲ್ಲಿ ಗುರುಪುಟ್ಟ ಕಲಾ ಬಳಗ, ಅಸ್ಕಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ‘ಎಡೆದೊರೆಯ ಸಾಯಿ ಸಂಭ್ರಮ‘ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಗವಂತನ ಸಾನಿಧ್ಯದಲ್ಲಿ ಇಂಥವೊಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ಸಾಯಿ ಸನ್ನಿಧಿಯಲ್ಲಿ 9 ನಾಣ್ಯಗಳ ದಿವ್ಯ ದರ್ಶನ, ಸಂಗೀತದ ಜ್ಞಾನ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಧರ್ಮದರ್ಶಿ ಸಾಯಿ ಕಿರಣ ಮಾತನಾಡಿ, ರಾಯಚೂರು ನಗರಕ್ಕೆ ದ್ವಾರಕಾದಿಂದ ಆಗಮಿಸಿದ ಸಾಯಿ ಮಂದಿರದ 9 ನಾಣ್ಯಗಳನ್ನು ತರುವುದಕ್ಕೆ ಕಳೆದ ಎರಡು ವರ್ಷಗಳ ಸತತ ಪ್ರಯತ್ನ ಮಾಡಲಾಗಿದೆ. ಸುಮಾರು 10 ರಿಂದ 15 ದೇಶಗಳಲ್ಲಿ ದರ್ಶನವನ್ನು ನೀಡಿ ಈಗ ರಾಯಚೂರಿಗೆ ಆಗಮಿಸಿವೆ. ಸಾರ್ವಜನಿಕರು ಇನ್ನೂ ಸುಮಾರು ಒಂಬತ್ತು ದಿನಗಳವರೆಗೆ ನಾಣ್ಯಗಳ ದರ್ಶನವನ್ನು ಮಾಡಬಹುದು ಎಂದು ತಿಳಿಸಿದರು.
ಗುರುಪುಟ್ಟ ಕಲಾ ಬಳಗದ ಅಧ್ಯಕ್ಷ ಸುಧಾಕರ ಅಸ್ಕಿಹಾಳ ಅಧ್ಯಕ್ಷತೆ ವಹಿಸಿದ್ದರು. ಆನಂತರ
ಭಕ್ತಿಗೀತೆ, ಭಾವಗೀತೆ, ತತ್ವಪದ, ಜಾನಪದ ಗೀತೆ, ಸಮೂಹ ನೃತ್ಯ, ಜಾನಪದ ಸಮೂಹ ನೃತ್ಯಗಳು ಹಾಗೂ ‘ಅರಿವು‘ ಎಂಬ ಹಾಸ್ಯ ನಾಟಕವನ್ನು ವೆಂಕಟನರಸಿಂಹಲು ತಂಡದಿಂದ ಪ್ರಸ್ತುತಪಡಿಸಲಾಯಿತು.
ವಾದ್ಯ ಸಹಕಾರದಲ್ಲಿ ವೆಂಕಟೇಶ ಆಲ್ಕೋಡ್, ಸೇತು ಮಾಧವ್ ಕೆರೂರು, ಅನಿಲಕುಮಾರ ಇದ್ದರು.