ಲಿಂಗಸುಗೂರು: ಪೋಷಣ್ ಟ್ರ್ಯಾಕರ್ ಆ್ಯಪ್ನ ಗೊಂದಲಗಳ ನಿವಾರಣೆ, ಸ್ತ್ರೀಶಕ್ತಿ ಭವನ ಮತ್ತು ಬಾಲಭವನ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಪದಾಧಿಕಾರಿಗಳು ಆಗ್ರಹ ಪಡಿಸಿದರು.
ಮಂಗಳವಾರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಅಮರೇಶ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಅವರು, ಸರ್ಕಾರದ ವೈಫಲ್ಯತೆ ಮುಚ್ಚಿಟ್ಟು ನೌಕರರು ಮತ್ತು ಫಲಾನುಭವಿಗಳನ್ನು ಸಂಕಷ್ಟಕ್ಕೀಡು ಮಾಡುತ್ತಿರುವ ಪೋಷಣ್ ಟ್ರ್ಯಾಕರ್ ಆ್ಯಪ್ನ ದೋಷಗಳ ಸರಿಪಡಿಸಬೇಕು. ಅದರ ಬಳಕೆಗೆ ಬೇಕಾಗುವ ತಂತ್ರಾಂಶ, ಖರ್ಚು ವೆಚ್ಚ ಸರ್ಕಾರವೆ ಭರಿಸಬೇಕು. ಆ್ಯಪ್ ಗೆ ನೌಕರರ ವೇತನ ತಳಕು ಹಾಕುತ್ತಿರುವುದನ್ನು ತಡೆಯಬೇಕು.
ನಿವೇಶನಗಳಿದ್ದರೂ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸ್ತ್ರೀ ಶಕ್ತಿ ಭವನ ಮತ್ತು ಬಾಲಭವನ ಕಟ್ಟಡ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಬೇಕು. ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಇಲಾಖೆಯೇತರ ಕೆಲಸ ಕಾರ್ಯಗಳಿಂದ ಮುಕ್ತಗೊಳಿಸಿ ಸುತ್ತೋಲೆ ಹೊರಡಿಸಬೇಕು. ಸೇವಾ ಅವಧಿಯಲ್ಲಿ ಮರಣಹೊಂದಿದ ಕುಟುಂಬಸ್ಥರಿಗೆ ಮರಣ ಪರಿಹಾರ ನೀಡಬೇಕು. ವೈದ್ಯಕೀಯ ಸೌಲಭ್ಯಕ್ಕೆ ಹಣ ಬಿಡುಗಡೆ ಮಾಡಬೇಕು.
ಬೇಡಿಕೆ ಆಧರಿಸಿ ಪಡಿತರ ಪೂರೈಸಬೇಕು. ನಿಗದಿತ ಅವಧಿಯಲ್ಲಿಯೆ ಗೌರವಧನ ಬಿಡುಗಡೆ ಮಾಡಬೇಕು. ಎಲ್ಐಸಿ ಕಂತುಗಳ ಹಣ ಕೂಡಲೆ ಪಾವತಿಸಬೇಕು. ಐಸಿಡಿಎಸ್ ಮುಂದುವರೆಸಿ ನೌಕರರರನ್ನು ಕಾಯಂಗೊಳಿಸಬೇಕು. 45ನೇ ಕಾರ್ಮಿಕ ಸಮ್ಮೇಳನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗದೆ ಹೋದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.