ರಾಯಚೂರು: ಮಂತ್ರಾಲಯದಲ್ಲಿ ಯುವ ಬ್ರಿಗೇಡ್ ಮುಖಂಡ ಸೂಲಿಬೆಲೆ ಚಕ್ರವರ್ತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ತುಂಗಭದ್ರಾ ನದಿಯನ್ನು ತ್ಯಾಜ್ಯಮುಕ್ತಗೊಳಿಸುವ ’ತುಂಗಾರತಿ‘ ವಿಶೇಷ ಅಭಿಯಾನ ಶನಿವಾರದಿಂದ ಆರಂಭಿಸಿದ್ದಾರೆ.
ನದಿ ಹರಿಯುವ ವಿಸ್ತಾರದುದ್ದಕ್ಕೂ ಬಿದ್ದಿರುವ ಪ್ಲಾಸ್ಟಿಕ್, ಬಟ್ಟೆ, ಗಾಜು, ಲೋಹದ ಅವಶೇಷ ಹಾಗೂ ಇತರೆ ತ್ಯಾಜ್ಯವನ್ನೆಲ್ಲ ವಿಲೇವಾರಿ ಮಾಡುತ್ತಿದ್ದಾರೆ. ನದಿನೀರಿನ ಕೆಸರಿನಲ್ಲಿ ಸೇರಿದ ತ್ಯಾಜ್ಯವನ್ನು ಕೂಡಾ ಎತ್ತಿ ಸಮಗ್ರವಾಗಿ ಶುಚಿತ್ವಗೊಳಿಸುತ್ತಿರುವುದು ಗಮನ ಸೆಳೆಯಿತು.
ಶ್ರೀರಾಘವೇಂದ್ರ ಸ್ವಾಮಿ ಮಠದ ಸಹಯೋಗದಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶುಭಾಶಿರ್ವಾದ ಸಂದೇಶ ನೀಡಿದರು. ಸ್ವಾಮೀಜಿ ಕೂಡಾ ಕೆಲಕಾಲ ಸ್ವಚ್ಛತೆಯಲ್ಲಿ ಪಾಲ್ಗೊಂಡು, ತ್ಯಾಜ್ಯರಾಶಿಯನ್ನು ಸಲಕರಣೆಯಿಂದ ಎತ್ತಿ ಹಾಕಿದರು. ಭಾನುವಾರ ಕೂಡಾ ಅಭಿಯಾನ ನಡೆಯಲಿದೆ.