ಮಸ್ಕಿ: ರಾಜ್ಯ ಸರ್ಕಾರದ ಪಠ್ಯಪರಿಷ್ಕರಣಾ ಸಮಿತಿ ಮುಖ್ಯಸ್ಥ ರೋಹಿತ್ ಚಕ್ರವರ್ತಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕರವೇ ತಾಲ್ಲೂಕು ಘಟಕ ಆಗ್ರಹಿಸಿದೆ.
ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ರೋಹಿತ್ ಚಕ್ರವರ್ತಿ ಕನ್ನಡ ವಿರೋಧಿಯಾಗಿದ್ದಾರೆ. ಡಾ. ಅಂಬೇಡ್ಕರ್, ಬಸವಣ್ಣ, ಕುವೆಂಪು ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ತಿರುಚುವ ಮೂಲಕ ದ್ರೋಹವೇಸಗುವ ಮೂಲಕ ನಾಡಿನ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರನ್ನು ಸಮಿತಿಯಿಂದ ವಜಾ ಮಾಡಿದರೆ ಸಾಲದು ಕೂಡಲೇ ಬಂಧಿಸಬೇಕು ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮುರಾರಿ ಒತ್ತಾಯಿಸಿದರು.
ಈಗಾಗಲೇ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿರುವ ಹೊಸ ವಿಷಯಗಳನ್ನು ಕೈಬಿಟ್ಟು ಹಿಂದಿನ ಪಠ್ಯಗಳನ್ನೇ ಮುಂದುವರೆಸಲು ಸರ್ಕಾರಕ್ಕೆ ಆಗ್ರಹಿಸಿದರು.
ತಹಶೀಲ್ದಾರ್ ಕವಿತಾ ಆರ್. ಮನವಿ ಸ್ವೀಕರಿಸಿದರು.
ಕರವೇ ನಗರ ಘಟಕದ ಅಧ್ಯಕ್ಷ ಮಂಜುನಾಥ, ರಾಜು ಛಲುವಾದಿ, ರಾಘು ಬಿಲ್ಲಿ, ಪ್ರದೀಪ್, ಮರಿಸ್ವಾಮಿ ಹಂಚಿನಾಳ, ರಿಯಾಜ್ ಅಹ್ಮದ್, ಶಿವಕುಮಾರ, ಬಾಬಾ, ಮೆಹಬೂಬ, ನಿಜಾಜ್ ಅಹ್ಮದ್ ಸೇರಿದಂತೆ ಕಾರ್ಯಕರ್ತರು ಇದ್ದರು.