ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಕೋಮುವಾದ ಪಕ್ಷ ಬಿಜೆಪಿ, ಬಂಡವಾಳ ಶಾಹಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಸಮಾನತೆಗಾಗಿ ಶ್ರಮಿಸುತ್ತಿರುವ ಬಹುಜನ ಸಮಾಜ ಪಕ್ಷವನ್ನು ಬೆಂಬಿಲಿಸಬೇಕು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ವೆಂಕನಗೌಡ ನಾಯಕ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಐದು ವರ್ಷಗಳಲ್ಲಿ ಸುಳ್ಳುಗಳನ್ನು ಹೇಳಿ ಆಡಳಿತ ನಡೆಸಿದೆ. ಕಾಂಗ್ರೆಸ್ನ ರಾಹುಲ್ ಗಾಂಧಿ ತಿಂಗಳಿಗೆ ₹ 6 ಸಾವಿರ ನೀಡುವುದಾಗಿ ಹೇಳುತ್ತಿದ್ದು, ಜನರಿಗೆ ಬೇಕಿರುವುದು ಹಣವಲ್ಲ. ಭೂ ರಹಿತರಿಗೆ ಐದು ಎಕರೆ ಭೂಮಿ ನೀಡುವ ಮೂಲಕ ಉದ್ಯೋಗ ಕಲ್ಪಿಸಿ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಯತ್ನಿಸಬೇಕಿದೆ ಎಂದರು.
ಸಂವಿಧಾನ ಜಾರಿಗೊಳಿಸಲು ಬದ್ಧತೆ ಹೊಂದಿರುವ ಬಿಎಸ್ಪಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸಿ ಕೃಷಿ, ಕೈಗಾರಿಕೆಗಳ ಬೆಳವಣಿಗೆಗೆ ಶ್ರಮಿಸಲಿದೆ. ಸ್ಥಳೀಯ ಸಮಸ್ಯೆಗಳಾದ ನೀರು, ಉದ್ಯೋಗ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಬಿಎಸ್ಪಿ ಬೆಂಬಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷ ಎಂ.ಆರ್.ಭೇರಿ ಮಾತನಾಡಿ, ದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಚುನಾವಣೆ ನಡೆಯುತ್ತಿದೆ ಎಂದು ಬಿಂಬಿಸಲಾಗುತ್ತಿದ್ದು, ಆದರೆ, ಮೂರನೇ ಶಕ್ತಿಯಾಗಿ ಬಿಎಸ್ಪಿ ಸ್ಪರ್ಧೆಯೊಡ್ಡಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ತಿರಸ್ಕರಿಸಿ ಬಿಎಸ್ಪಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ಸೋಮಶೇಖರ ರಾಮದುರ್ಗ, ಹನುಮಂತಪ್ಪ ವಕೀಲ, ಹನುಮಂತಪ್ಪ ಭಂಡಾರಿ, ಜೈಭೀಮ ಇದ್ದರು.