ರಾಯಚೂರು: ಪರರ ಒಳಿತಿಗಾಗಿ ಜೀವನದಲ್ಲಿ ಉಪಕಾರದ ಕಾರ್ಯವನ್ನು ಮಾಡಬೇಕು. ಮನುಷ್ಯ ಸ್ವಾರ್ಥಕ್ಕಾಗಿ ಬದುಕಬಾರದು ಎಂದು ಲಿಂಗಸುಗೂರಿನ ಸಾಹಿತಿ ಶ್ರೀನಿವಾಸರಾವ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸ್ವಾರ್ಥಕ್ಕೆ ಮನ್ನಣೆ ನೀಡುವವರು ಸಮಾಜಕ್ಕೆ ಮಾರಕವಾಗುವ ಕೆಲಸಗಳನ್ನು ಮಾಡಲಿದ್ದಾರೆ. ಇಂತಹವರಿಂದ ಸಾಹಿತ್ಯ ಹಾಗೂ ಸಂಸ್ಕೃತಿಯೂ ನಾಶವಾಗುತ್ತಿದೆ. ಮನುಷ್ಯನ ಸ್ವಾರ್ಥಕ್ಕೆ ಸಮಾಜ ದುರ್ಬಳಕೆಯಾಗುತ್ತಿದೆ ಎಂದರು.
ಸಮಾಜದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಂತಹ ದುಸ್ಥಿತಿ ನಿರ್ಮಾಣಕ್ಕೆ ಮನುಷ್ಯ ಕಾರಣನಾಗಿದ್ದು, ಸಮಾಜದ ಒಳತಿಗಾಗಿ ಸ್ವಾರ್ಥವನ್ನು ಬಿಡಬೇಕಾಗಿದೆ. ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತಹ ಕೆಲಸಗಳನ್ನು ಮಾಡಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕೆ.ಗಿರಿಜಾ ರಾಜಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರಮೋದ ಕಟ್ಟಿ, ಶಿಕ್ಷಕ ವೆಂಕಟೇಶ ನವಲಿ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾಲೇಜಿನ ಪ್ರಭಾರಿ ಪ್ರಾಚಾರ್ಯ ದಸ್ತಗಿರಿಸಾಬ್ ದಿನ್ನಿ, ತ್ರಿವಿಕ್ರಮ ಜೋಷಿ, ವಿದ್ಯಾದೇಸಾಯಿ, ನರಸಿಂಗರಾವ್, ಭೀಮನಗೌಡ ಇಟಗಿ ಇದ್ದರು.