ಶಕ್ತಿನಗರ (ರಾಯಚೂರು ಜಿಲ್ಲೆ): ಪೆದ್ದಕುರಂ (ಕುರ್ವಕುಲಾ) ಗ್ರಾಮದ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಗೋಲು ಹಾಕುತ್ತಿದ್ದ ಆಂಜಿನಯ್ಯ ವಿರುದ್ಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನದಿಯಲ್ಲಿ ಜನರನ್ನು ತೆಪ್ಪದಲ್ಲಿ ಕರೆದೊಯ್ಯದಂತೆ ಜಿಲ್ಲಾಡಳಿತ ಸೂಚಿಸಿದ್ದರೂ ನಿಯಮ ಉಲ್ಲಂಘಿಸಿ, ಆಗಸ್ಟ್ 17ರಂದು 13 ಜನರನ್ನು ಆಂಜಿನಯ್ಯ ತೆಪ್ಪದಲ್ಲಿ ಕರೆದೊಯ್ದಿದ್ದ. ನೀರಿನ ರಭಸಕ್ಕೆ ತೆಪ್ಪ ಮುಳುಗಿ, ನಾಲ್ವರು ನಾಪತ್ತೆಯಾಗಿದ್ದರು.
ಬಾಲಕಿ ಮೃತದೇಹ ಪತ್ತೆ: ತೆಲಂಗಾಣ ಗಡಿ ಪ್ರದೇಶದ ಜುರಾಲಾ ಅಣೆಕಟ್ಟು ಬಳಿ ಮೂವರ ಮೃತ ದೇಹಗಳು ಪತ್ತೆಯಾದ ಸ್ಥಳದ ಸಮೀಪವೇ 5 ದಿನಗಳ ಬಳಿಕ ಶುಕ್ರವಾರ ಬಾಲಕಿ ರೋಜಾ (6) ಮೃತದೇಹ ಪತ್ತೆಯಾಗಿದೆ. ಎನ್ಡಿಆರ್ಎಫ್, ಅಗ್ನಿಶಾಮಕ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿತ್ತು.
₹ 20 ಲಕ್ಷ ಪರಿಹಾರ: ಪೆದ್ದಕುರಂ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಸನಗೌಡ ದದ್ದಲ್ ಅವರು ವಿಪತ್ತು ಪರಿಹಾರ ನಿಧಿಯಡಿ ತಲಾ ₹ 5 ಲಕ್ಷದಂತೆ ಒಟ್ಟು ₹ 20 ಲಕ್ಷ ಪರಿಹಾರದ ಚೆಕ್, ಮೃತರ ಕುಟುಂಬದವರಿಗೆ ನೀಡಿದರು.