ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಸರ್ಕಾರ ಬೀಳಿಸಿದ್ದು ಸಿದ್ಧರಾಮಯ್ಯ: ನಳೀನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ
Last Updated 21 ಅಕ್ಟೋಬರ್ 2020, 2:03 IST
ಅಕ್ಷರ ಗಾತ್ರ

ಮಸ್ಕಿ: ಜನಾದೇಶಕ್ಕೆ ವಿರುದ್ಧವಾಗಿ ರಾತ್ರೋ ರಾತ್ರಿ ಪ್ರೇಮ ವಿವಾಹ ಮಾಡಿಕೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚನೆ ಮಾಡಿದರು. ಆದರೆ, ಇದು ಸಿದ್ದರಾಮಯ್ಯ ಅವರಿಗೆ ಬೇಕಾಗಿರಲಿಲ್ಲ. ಈ ಸರ್ಕಾರ ಕೆಡವಿದ್ದು ಬಿಜೆಪಿ ಅಲ್ಲ. ಸಿದ್ಧರಾಮಯ್ಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರಗಳ ಹಾಗೂ ಮುಖಂಡರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಕುಟುಂಬ ಹಾಗೂ ವಂಶಾಡಳಿತ ಪಕ್ಷಗಳಿಂದ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಮುಖ್ಯ ಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಐಶಾರಾಮಿ ಹೊಟೇಲ್‌ನಲ್ಲಿ ಕಾಲ ಕಳೆದರೆ, ಸಿದ್ಧರಾಮಯ್ಯ ನಿದ್ದೆಯಲ್ಲಿ ಅಧಿಕಾರ ಪೂರ್ಣಗೊಳಿಸಿದರು. ಆದರೆ, ಯಡಿಯೂರಪ್ಪ ಅವರು ರಾಜ್ಯದ ಉದ್ದಗಲಕ್ಕೂ ಹೋಗಿ ಜನರ ಕಷ್ಟ ಸುಖಗಳನ್ನು ಆಲಿಸಿದರು ಎಂದರು.

ಸಿದ್ಧರಾಮಯ್ಯ ಮುಖ್ಯ ಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ 24 ಹಿಂದುಗಳ ಕೊಲೆಯಾಯಿತು. ಟಿಪ್ಪು ಜಯಂತಿ ಆಚರಣೆ ಜಾರಿಗೆ ತರುವ ಮೂಲಕ ಹಿಂದೂ ಮುಸ್ಲಿಂ ಸಮುದಾಯದಲ್ಲಿ ಜಗಳ ಹಚ್ಚುವ ಕೆಲಸ ಮಾಡಿದರು. ವೀರಶೈವ ಲಿಂಗಾಯತ ಧರ್ಮ ಹೊಡೆಯಲು ಮುಂದಾದರು ಎಂದು ಆರೋಪಿಸಿದರು.

ರಾಜ್ಯದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಪ್ರತಿ ಕುಟುಂಬದ ಖಾತೆಗೆ ಮುಖ್ಯಮಂತ್ರಿಗಳು ₹ 10 ಸಾವಿರ ಹಣ ಹಾಕಿದ್ದಾರೆ. ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿ ಜನರ ಕಷ್ಟಗಳನ್ನು ಆಲಿಸಿ ಮತ್ತಷ್ಟು ಪರಿಹಾರ ಘೋಷಣೆ ಮಾಡಲಿದ್ದಾರೆ ಎಂದರು.

ಆರ್.ಆರ್. ನಗರ ಹಾಗೂ ಶಿರಾ ಉಪ ಚುನಾವಣೆ ಸೇರಿದಂತೆ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಗೆಲವು ಸಾಧಿಸಲಿದೆ ಎಂದರು.

ಮಸ್ಕಿ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲೂ ಚುನಾವಣೆ ಬರಬಹುದು. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಇಂದಿನಿಂದಲೇ ಸಂಕಲ್ಪ ಯಾತ್ರೆ ಆರಂಭಿಸಿ ಎಂದು ಕರೆ ನೀಡಿದರು.

ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ರಾಜುಗೌಡ, ಮಾಜಿ ಮಾಜಿ ಶಾಸಕಾರ ತಿಪ್ಪರಾಜ ಹವಲ್ದಾರ್, ಶಶೀಲ್ ನಮೋಶಿ, ಪ್ರತಾಪಗೌಡ ಪಾಟೀಲ್ ಮಾತನಾಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ ನಾರಾಯಣ, ಶಾಸಕರಾದ ಡಾ. ಶಿವರಾಜ ಪಾಟೀಲ್, ರಾಜಕುಮಾರ ಪಾಟೀಲ್ , ಮುಖಂಡ ಸಿದ್ದೇಶ ಯಾದವ್, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಾನಂದ ಯಾದವ್, ಮಸ್ಕಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಸೇರಿದಂತೆ ಮುಖಂಡರು ಇದ್ದರು.

ಬಸನಗೌಡ ಬಣ ಗೈರು

ಮಸ್ಕಿಯಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಶಕ್ತಿ ಕೇಂದ್ರಗಳ ಸಮಾವೇಶಕ್ಕೆ ಕಾಡಾ ಅಧ್ಯಕ್ಷ ಆರ್. ಬಸನಗೌಡ ಮತ್ತು ಅವರ ಬಣ ಗೈರು ಹಾಗುವ ಮೂಲಕ ಬಿಜೆಪಿಯಲ್ಲಿ ಭಿನ್ನಮತ ಇದೆ ಎಂಬುದನ್ನು ಸಾಬೀತು ಪಡಿಸಿತು.

ಕಳೆದೊಂದು ವಾರದಿಂದ ಆರ್. ಬಸನಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತಾರೆ ಎಂಬ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದ್ದ ಹಲವಾರು ಪೋಸ್ಟ್ ಗಳಿಗೆ ಪುಷ್ಟಿ ಎಂಬಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಕಾರ್ಯಕ್ರಮಕ್ಕೆ ಬಸನಗೌಡ ಅವರು ಗೈರು ಹಾಜರಾಗುವ ಮೂಲಕ ಭಿನ್ನಮತ ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT