ರಾಯಚೂರು: ದಾಸವರೇಣ್ಯ ಶ್ರೀ ಮಹಿಪತಿದಾಸರು ಯೋಗ ಮಾರ್ಗದ ಮೂಲಕ ತಾವು ಅನುಭವಿಸಿದ ಅಧ್ಯಾತ್ಮ ಸಿದ್ಧಿಯನ್ನು ತಮ್ಮ ಕೃತಿಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿ ವಿಶಿಷ್ಟತೆ ಮೆರೆದಿದ್ದಾರೆ ಎಂದು ಹರಿದಾಸ ಹವ್ಯಾಸಿ ಕಲಾವಿದರ ಸಂಘದ ಅಧ್ಯಕ್ಷ ಅರುಣ ಕಾಂತನವರ ಹೇಳಿದರು.
ನಗರದ ಕರ್ನಾಟಕ ಸಂಘ ಮತ್ತು ದಾಸ ಸಾಹಿತ್ಯ ಅಧ್ಯಯನ ಕೇಂದ್ರದ ಮಂಗಳವಾರ ಏರ್ಪಡಿಸಿದ್ದ ’ಹರಿದಾಸ ನಮನ ಗಾಯನ’ ಮಾಲಿಕೆಯ ಆರನೆಯ ಆವೃತ್ತಿಯಲ್ಲಿ ಶ್ರೀ ಮಹಿಪತಿದಾಸರ ಕುರಿತು ಉಪನ್ಯಾಸ ನೀಡಿದರು.
ನಿವೃತ್ತ ಕನ್ನಡ ಉಪನ್ಯಾಸಕ ಬಿ. ಜಿ.ಹುಲಿ, ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿನ ಮೌಲ್ಯಗಳ ವಿಶ್ಲೇಷಣೆ ಮಾಡಿದರು. ದ್ವೈತ ಅದ್ವೈತ ತತ್ವಗಳಲ್ಲ್ಲಿ ಅಡಕವಾದ ಭಾವ ಅನುಭಾವದ ಸ್ಥಿತಿಗಳನ್ನು ವಿವರಿಸಿದರು.
ಸಂಗೀತ ವಿದ್ವಾಂಸ ಪಂಡಿತ್ ವಾಯು ಜೀವೋತ್ತಮಾಚಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರ ಜೀವನ ಸಾಧನೆ ಕುರಿತು ಎಲ್ ವಿ ಡಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಶೀಲಾದಾಸ್ ಪರಿಚಯ ಮಾಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ನರಸಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀನಿವಾಸ ಗಟ್ಟು ಸ್ವಾಗತಿಸಿದರು. ರಾಜಶ್ರೀ ಕಲ್ಲೂರಕರ್ ನಿರೂಪಿಸಿದರು.