ರಾಯಚೂರು: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದರು.
ನಗರದ ಕರ್ನಾಟಕ ವೆಲ್ಫೇರ್ ಟ್ರಸ್ಟ್ ಶಾಲೆಯಲ್ಲಿ ಸೂರ್ಯೋದಯ ವಾಕಿಂಗ್ ಕ್ಲಬ್ನಿಂದ ಭಾನುವಾರದಿಂದ ಆರಂಭಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಓದುವುದಕ್ಕೆ ಹೆಚ್ಚು ಸಮಯ ಮೀಸಲಿಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ. ಪ್ರಶ್ನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ, ಗೊಂದಲ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಬಿ.ಎಚ್.ಗೋನಾಳ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ರಾಯಚೂರು ಜಿಲ್ಲೆ 33 ನೇ ಸ್ಥಾನದಲ್ಲಿದ್ದು, ಈ ಸ್ಥಾನದಿಂದ ಸುಧಾರಣೆ ಹಂತಕ್ಕೆ ಬರಬೇಕಿದೆ. ಇದಕ್ಕಾಗಿ ತರಬೇತಿಗಳು ಪೂರಕವಾಗುತ್ತವೆ ಎಂದು ತಿಳಿಸಿದರು.
ನಿರಂತರ ಅಭ್ಯಾಸ ನಡೆಸಿ,ಸಾಧನೆ ಮಾಡಿದವರು, ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ವಿವರಿಸಿದರು.
ಬಿಜೆಪಿ ಮುಖಂಡ ರವೀಂದ್ರ ಜಲ್ದಾರ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ₹11 ಸಾವಿರ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಸೂರ್ಯೋದಯ ಕ್ಲಬ್ನ ಅಧ್ಯಕ್ಷ ಬಿ.ಬಸವರಾಜ, ಗೌರವ ಅಧ್ಯಕ್ಷ ಡಾ.ರಿಯಾಜುದ್ದೀನ್, ಕಾಮಧೇನು ಮಹಿಳಾ ಮಂಡಳಿ ಅಧ್ಯಕ್ಷೆ ರಾಜರಾಜೇಶ್ವರಿ, ವೆಂಕಟೇಶ್ವರ ಕಾಲೇಜಿನ ಅಧ್ಯಕ್ಷೆ ರಾಕೇಶ ರಾಜಲಬಂಡಿ, ನಿವೃತ್ತ ಶಿಕ್ಷಕ ಸಿ.ಎ.ಹಿರೇಮಠ, ಮೋಹಿನುಲ್ ಹಕ್ ಇದ್ದರು.