ರಾಯಚೂರು: ನೌಕರರು ಸಂಘಟಿತರಾಗಿ ಸರ್ಕಾರಿ ಯೋಜನೆಗಳ ಸಮರ್ಪಕವಾಗಿ ಜಾರಿ ಮಾಡಿದರೆ ಸಮುದಾಯದ ಸಮಗ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪ್ರೇಕ್ಷಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಪ್ರಥಮ ಜಿಲ್ಲಾಮಟ್ಟದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಈ ಜಾಗೃತಿ ಸಮಾವೇಶದ ಮೂಲಕ ಎಲ್ಲರೂ ಸಂಘಟಿತರಾಗಿ. ಬೇಡಿಕೆಗಳಿದ್ದರೆ ನನ್ನ ವ್ಯಾಪ್ತಿಯಲ್ಲಿ ಸಾಧ್ಯವಾಗುವುದನ್ನು ಈಡೇರಿಸಲು ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಬಿ.ಶಿವಶಂಕರ ಮಾತನಾಡಿ, ಜಾತಿಗಳಿಂದಲೇ ರಚನೆಗೊಂಡ ಸಮಾಜದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರು ಜಾಗೃತರಾಗುವುದರೊಂದಿಗೆ ತಮ್ಮ ಸಮುದಾಯದ ಅಭಿವೃದ್ಧಿಗೂ ಸಂಘಟಿತರಾಗಬೇಕು ಎಂದರು.
ಜಾತಿ ಸಂಘಟನೆಗಳಲ್ಲಿ ಎಸ್ಸಿ, ಎಸ್ಟಿ ನೌಕರರ ಅವಮಾನಿಸುವ ಘಟನೆಗಳಿಗೆ ಮೇಲ್ವರ್ಗದ ಸಂಘಟನೆಗಳು ಕಾರಣವಾಗಿವೆ. ಜಾತಿ ಇಲ್ಲದೆ ಸಮಾಜವಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಉದ್ಧಾರಕ್ಕೂ, ಹಿಂದುಳಿಯುವಿಕೆಗೂ ಜಾತಿಯೇ ಕಾರಣವಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರು ಎಸ್ಸಿ, ಎಸ್ಟಿ ಸಮುದಾಯದ ನೌಕರರು ತಮ್ಮ ಜಾತಿಗಳ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡು ಅರಿವು ಮೂಡಿಸುವಂಥ ಕಾರ್ಯನಿರ್ವಹಿಸಬೇಕು. ಯುವ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕಡಿಮೆ ಮೀಸಲಾತಿ ಇರುವ ಸಮುದಾಯಗಳನ್ನೇ ಕೆಲವು ವರ್ಗಗಳು ಗುರಿಯಾಗಿಸಿಕೊಂಡು ಸೌಲಭ್ಯ ಕಸಿದು ಎಸ್ಸಿ, ಎಸ್ಟಿಗೆ ಸೇರಿಸಿ ಎಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿ ಸಂಘಟಿತರಾಗಬೇಕು. ಹೀಗೆ ಮುಂದುವರಿದರೆ ಸಂವಿಧಾನಬದ್ಧ ಹಕ್ಕುಗಳು ಉಳಿಯುವುದಿಲ್ಲ ಎಂದು ತಿಳಿಸಿದರು.
ಶೇ 32ರಷ್ಟು ಮೀಸಲಾತಿ ಹೊಂದಿದ ಹಿಂದುಳಿದ ವರ್ಗದ ಅನೇಕ ಸಮುದಾಯಗಳು ಶೇ 15, ಶೇ ರಷ್ಟು ಮೀಸಲಾತಿ ಹೊಂದಿದ ಎಸ್ಸಿ, ಎಸ್ಟಿ ಸಮುದಾಯವನ್ನು ನಿಂದಿಸುತ್ತಿವೆ ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಎ.ವಸಂತಕುಮಾರ, ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಅಣಂದೂರಿನ ಧಮ್ಮದೀಪ ಭಂತೇಜಿ ಮಾತನಾಡಿದರು.
ಉತ್ತಮ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಡಾ.ಬಿ.ಆರ್.ಅಂಬೇಡ್ಕರ್ ಸರ್ವಶ್ರೇಷ್ಠ ಪ್ರಶಸ್ತಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಅಂಬಣ್ಣ ಅರೋಲಿ, ರವೀಂದ್ರನಾಥ ಪಟ್ಟಿ, ಡಾ.ಹರಿಪ್ರಸಾದ, ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣ, ಸಂಘದ ಜಿಲ್ಲಾಧ್ಯಕ್ಷ ಜಿಂದಪ್ಪ, ಗೌರವಾಧ್ಯಕ್ಷ ಮೂಕಪ್ಪ ಕಟ್ಟಿಮನಿ, ಸಂತೋಷ ನಂದಿನಿ, ಮಹಿಳಾಧ್ಯಕ್ಷೆ ಎನ್.ಸರಸ್ವತಿ, ತಾಲೂಕಾಧ್ಯಕ್ಷ ರಾಘವೇಂದ್ರ, ಡಾ.ಜಾಗೃತಿ ದೇಶಮಾನೆ, ವೆಂಕಟಸ್ವಾಮಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.