ರಾಯಚೂರು: ಲೋಕಸಭೆ ಚುನಾವಣೆಯ ಮತದಾನ ಮುಗಿದ ಕೂಡಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಕಚ್ಚಾಟ ಶುರುವಾಗಲಿದ್ದು, ಫಲಿತಾಂಶ ಬರುವ ವೇಳೆಗೆ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಮಧ್ಯಂತರ ಚುನಾವಣೆಯೂ ಎದುರಾಗಬಹುದು ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಅಧಿಕಾರಕ್ಕೆ ಬಂದು ವರ್ಷವಾದರೂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್.ಮುನಿಯಪ್ಪನಂತಹ ನಾಯಕರಿಗೂ ಜೆಡಿಎಸ್ನವರು ಬೆಂಬಲಿಸಿಲ್ಲ. ಫಲಿತಾಂಶದ ನಂತರ ಸರ್ಕಾರ ಕಚ್ಚಾಟ ಕೊನೆಯಾಗಲಿದೆ ಎಂದರು.
ಭೀಕರ ಬರಗಾಲವಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನೀರಿನ ಸಮಸ್ಯೆ ಗಂಭೀರವಾಗಿದ್ದು, ಸರ್ಕಾರ ಪರಿಹಾರ ಕಂಡುಕೊಂಡಿಲ್ಲ. ಸರ್ಕಾರ ಜನರ ಶಾಪಕ್ಕೆ ಗುರಿಯಾಗಲಿದೆ. ಹಾಸನ, ಮಂಡ್ಯ ಹಾಗೂ ತುಮಕೂರಿನಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ವ್ಯತಿರಿಕ್ತ ಫಲಿತಾಂಶ ಬರಲಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ನಾಯಕತ್ವಕ್ಕೆ ಬೆಲೆಯಿಲ್ಲ. ಅನೇಕ ಪಕ್ಷಗಳು ಈಗಾಗಲೇ ವಿರೋಧ ಮಾಡಿವೆ. ದೇಶದಲ್ಲಿ ನರೇಂದ್ರ ಮೋದಿ ಪರವಾದ ಅಲೆಯಿದೆ. ಮಹಾಘಟಬಂಧನ್ ಮಾಡಿಕೊಂಡ ಪಕ್ಷೆಗಳೇ ಕಚ್ಚಾಡುತ್ತಿವೆ. ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗುವುದು ಶತಸಿದ್ಧ ಎಂದರು.
ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಏಳೆಂಟು ಭರವಸೆಗಳನ್ನು ಮಾತ್ರ ಈಡೇರಿಲ್ಲ. ಆದರೂ, ಜನರ ಸಮಸ್ಯೆಗಳಿಗೆ ಪರಿಹಾರವಾಗಿ ಮೋದಿ ಕಾರ್ಯನಿರ್ವಹಿಸಿದ್ದಾರೆ. ಮುಸ್ಲಿಂ ಜನಾಂಗದ ಬಗ್ಗೆ ಕೆ.ಎಸ್.ಈಶ್ವರಪ್ಪ ಹೇಳಿಕೆ ಸರಿಯಲ್ಲ. ಶಿವನಗೌಡ ನಾಯಕ ಕೂಡ ಹೇಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದರು.
ಜಿಲ್ಲಾ ಅಧ್ಯಕ್ಷ ಶರಣಪ್ಪಗೌಡ, ಬಸವರಾಜಪಾಟೀಲ ಅನ್ವರಿ, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಎ.ಚಂದ್ರಶೇಖರ ಇದ್ದರು.