ರಾಯಚೂರು: ನಗರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಶೆಟಲ್ ಬ್ಯಾಡ್ಮಿಂಟನ್ ಅಸೋಷಿಯೇಷನ್ನಿಂದ ಆಯೋಜಿಸಿದ ರಾಜ್ಯಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೋವಿಡ್ ಮಹಾಮಾರಿ ಬಳಿಕ ಕ್ರೀಡಾಚಟುವಟಿಕೆಗಳನ್ನು ಆರಂಭಿಸುವುದು ಒಳ್ಳೆಯ ಸಂಗತಿ ಎಂದರು.
ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಮಾತನಾಡಿದರು.
ಉದ್ಯಮಿಗಳಾದ ಕಿರಣ ಬೆಲ್ಲಂ, ಈ.ಆಂಜಿನೇಯ್ಯ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಜಗದೀಶ ಗುಪ್ತಾ, ಕೆ.ಈರಣ್ಣ, ಡಾ.ಮಲ್ಲಿಕಾರ್ಜುನ ಮತ್ತಿತರರು ಇದ್ದರು.
ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 495 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಅಕ್ಟೋಬರ್ 8 ರವರೆಗೂ ಪಂದ್ಯಾವಳಿಗಳು ನಡೆಯಲಿವೆ. 19 ವರ್ಷದೊಳಗಿನವರಿಗೆ ಚಾಂಪಿಯನ್ಶಿಪ್, 19 ವರ್ಷ ಮೇಲ್ಪಟ್ಟು 45 ವರ್ಷದೊಳಗಿನವರಿಗೆ ಚಾಂಪಿಯನ್ಶಿಪ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಪಂದ್ಯಾವಳಿಗಳು ನಡೆಯಲಿವೆ.
ಪಂದ್ಯಾವಳಿಯಲ್ಲಿ ಅಂತರರಾಷ್ಟ್ರೀಯ ರ್ಯಾಂಕಿಂಗ್ನಲ್ಲಿರುವ ಅಶ್ವಿನ್ ಭಟ್, ಶೇಖರ್ ಗೌತಮ್, ಸಾಯಿಪ್ರತೀಕ್, ತನಿಯಾ, ನಾರೇನ್, ಭಾರ್ಗವ್ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಷಿಯೇಷನ್ ವತಿಯಿಂದ 11 ನಿರ್ಣಾಯಕರು ಭಾಗವಹಿಸಿದ್ದಾರೆ. ಪ್ರತಿಯೊಂದು ವಿಭಾಗದಲ್ಲೂ ಸಿಂಗಲ್ಸ್, ಡಬಲ್ಸ್ ಹಾಗು ಮಿಕ್ಸ್ ಪಂದ್ಯಗಳು ನಡೆಯಲಿದ್ದು, ಕೊನೆಯ ದಿನ ಆಕ್ಟೋಬರ್ 8ರಂದು ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ.