ರಾಯಚೂರು: ನಗರದ ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಬೀದಿ ಬದಿ ಮಾರಾಟಗಾರರ ಸಂಘವು ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ಗುರುವರ ಪ್ರತಿಭಟನೆ ನಡೆಸಿದರು.
ಪಾದಚಾರಿ ಮಾರ್ಗದ ಮೇಲೆ ಸಣ್ಣ ಪುಟ್ಟ ವ್ಯಾಪಾರಿಗಳು ಹಣ್ಣು, ತರಕಾರಿ ಬಂಡಿ, ಪಾನ್ಡಬ್ಬ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ನಗರಸಭೆಗೆ ತೆರಿಗೆಯನ್ನು ನೀಡಲಾಗುತ್ತಿದೆ. ಆದರೆ, ಬೀದಿಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿ ಬೀದಿಪಾಲು ಮಾಡುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆ ಕಾಯ್ದೆಯನ್ನು ಜಾರಿಗೆ ತಂದಿದೆ. ವ್ಯಾಪಾರಿಗಳಿಗೆ ಕನಿಷ್ಠ ಸೌಲಭ್ಯ ನೀಡಬೇಕು, ಸಮಿತಿ ರಚನೆ ಮಾಡಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಮಾಡಬೇಕು, ಗುರುತಿನ ಚೀಟಿ ನೀಡುವ ಮೂಲಕ ಪಾದಚಾರಿ ರಸ್ತೆಯ ಹಿಂಭಾಗದಲ್ಲಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ವ್ಯಾಪಾರಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ತರಕಾರಿ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಟಿಯುಸಿಐ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಅಮರೇಶ, ಶೇಖ್ ಹುಸೇನ್ ಬಾಷಾ, ರವಿ ದಾದಸ್, ಸೈಯದ್ ಮಹ್ಮದ್, ಕರಿಮುಲ್ಲಾ ಇದ್ದರು.