ರಾಯಚೂರು:ಸಚಿವ ಎಚ್.ಡಿ.ರೇವಣ್ಣ ಅವರು ಸುಮಲತಾ ಅವರ ಕುರಿತು ನೀಡಿರುವ ಹಗುರವಾದ ಹೇಳಿಕೆಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ ಶನಿವಾರ ರಾಜ್ಯದ ಜನರ ಕ್ಷಮೆ ಕೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಂದ ಇಂತಹ ಮಾತನ್ನು ನಿರೀಕ್ಷಿರಲಿಲ್ಲ. ಪಕ್ಷದಲ್ಲಿ ಮಹಿಳೆಯರಿಗೆ ಅಪಾರ ಗೌರವ ಕೊಡುತ್ತೇವೆ. ಪಕ್ಷದ ಚಿಹ್ನೆಯೂ ತೆನೆಹೊತ್ತ ಮಹಿಳೆ’ ಎಂದು ಹೇಳಿದರು.
‘ಕುಟುಂಬ ರಾಜಕಾರಣ ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಇದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಅವರ ಮನೆಗಳಲ್ಲೂ ಇದೆ. ಜೆಡಿಎಸ್ನಲ್ಲಿ ಮಾತ್ರ ಇಲ್ಲ. ಮನೆಯಲ್ಲಿ ಇಬ್ಬರಾಗಲಿ, ನಾಲ್ಕು ಜನರಾಗಲಿ ಕುಟುಂಬ ರಾಜಕಾರಣ ಎನ್ನುವ ವಿಷಯ ಪ್ರಶ್ನೆಯಾಗಿ ಉಳಿದಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಲೋಕಸಭೆ ಸೀಟುಗಳ ಹಂಚಿಕೆ ವಿಚಾರ ಜೆಡಿಎಸ್, ಕಾಂಗ್ರೆಸ್ ನಡುವೆ ಅಂತಿಮವಾಗಿಲ್ಲ. ಈ ಬಗ್ಗೆ ಊಹೆಗಳನ್ನು ಮಾಡಿಕೊಳ್ಳಬಾರದು. ರಾಯಚೂರು ಲೋಕಸಭೆ ಕ್ಷೇತ್ರದ ಸೀಟಿನ ಬಗ್ಗೆಯೂ ಚರ್ಚೆಯಾಗಬೇಕಿದೆ’ ಎಂದು ಹೇಳಿದರು.