ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್ಕೆಆರ್ಡಿಬಿ)ಯಿಂದ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನವನ್ನು ಸಂಪೂರ್ಣ ಬಳಸಿಕೊಂಡು ಅನುದಾನ ವೆಚ್ಚ ಮಾಡಬೇಕು. ಅನುದಾನ ಬಳಸದೆ ಹೊಸ ಕ್ರಿಯಾಯೋಜನೆ ಸಲ್ಲಿಸಿದರೆ ಅನುಮೊದನೆ ನೀಡುವುದಿಲ್ಲ ಎಂದು ಎಚ್ಕೆಆರ್ಡಿಬಿ ಕಾರ್ಯದರ್ಶಿ ಸುಬೋಧ ಯಾದವ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಅನುದಾನ ಬಳಕೆಯ ಆಧಾರದ ಮೇಲೆಯೇ ರಾಜ್ಯ ಸರ್ಕಾರವು ಹಂತಹಂತವಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಘೋಷಣೆ ಮಾಡಿದ ಅನುದಾನದಲ್ಲಿ ಕಡಿತಗೊಳಿಸುವುದಿಲ್ಲ ಎಂದರು.
ಅನುದಾನ ಬಳಕೆ ಮಾಡಿಕೊಂಡ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ಕೊಡಬೇಕು. ಮೈಕ್ರೊ ಯೋಜನೆಯಲ್ಲಿ ಕೈಗೊಂಡಿರುವ ಶಿಕ್ಷಣ, ಆರೋಗ್ಯ, ಅಂಗನವಾಡಿ ಶಾಲೆಗಳ ಕಟ್ಟಡ, ಶೌಚಾಲಯ ನಿರ್ಮಾಣವನ್ನು ಕಾಲಮಿತಿಯಲ್ಲಿ ಮುಗಿಸಬೇಕು. ಕಾಮಗಾರಿ ವಿಳಂಬವಾದರೆ ಅಧಿಕಾರಿಗಳನ್ನೆ ಹೊಣೆಗಾರ ಮಾಡಲಾಗುವುದು ಎಂದು ತಿಳಿಸಿದರು.
ಶಾಲಾ, ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಅವಶ್ಯಕತೆ ಆಧಾರದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಹಿಂದಿನ ಯೋಜನೆಗಳಲ್ಲಿ ಮಾಡಿರುವ ಕಾಮಗಾರಿಯನ್ನೆ ಮತ್ತೆ ಸೇರಿಸಿಕೊಳ್ಳಬಾರದು. ಬರೀ ಕಾರಣಗಳನ್ನು ಹೇಳಿಕೊಂಡು ಕಾಲಹರಣ ಮಾಡುವುದನ್ನು ಕೈಬಿಡಬೇಕು ಎಂದು ತಾಕೀತು ಮಾಡಿದರು.
ಅವುಗಳನ್ನು ಪರಿಹರಿಸುವಜಾಣ್ಮೆಯ ಅಧಿಕಾರಿಗಳು ಹೊಂದಿರಬೇಕೇಂದರು. ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವಾಗ ಅವಶ್ಯಕತೆ ಇರುವಲ್ಲಿ ಯೋಜನೆ ರೂಪಿಸಬೇಕು. ಈಗಾಗಲೇ ಅವುಗಳಿಗೆ ಕಟ್ಟಡಗಳಿದ್ದರೆ ಮತ್ತೊಂದು ಯೋಜನೆಯನ್ನು ರೂಪಿಸಬಾರದು ಎಂದರು.
ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ನಲಿನ್ ಅತುಲ್, ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.