ಸಿಂಧನೂರು: ‘ಮಹಿಳೆಯರು ಕೇವಲ ಮನೆಗಷ್ಟೇ ಸೀಮಿತರಾಗಬಾರದು. ಅವರು ಮಕ್ಕಳ ಪಾಲನೆ, ಪೋಷಣೆಯಲ್ಲಿಯೇ ಜೀವನ ಸವೆಸುತ್ತಾರೆ. ಅವರು ಸಹ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆನಂದಪ್ಪ ಎಂ. ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ನ್ಯಾಯವಾದಿಗಳ ಸಂಘ, ಸ್ನೇಹಸಂಸ್ಥೆ ಸಹಯೋಗದಲ್ಲಿ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ನಡೆದ ದೇವದಾಸಿ ಮಹಿಳೆಯರ ಸ್ಥಿತಿಗತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದುರ್ಬಲರು, ನಿರಾಶ್ರಿತರು, ಗುಂಪು ಘರ್ಘಣೆಗೆ ಸಿಲುಕಿದವರು, ನೊಂದವರು ಕೋರ್ಟಿಗೆ ಬಂದು ಅರ್ಜಿ ನೀಡಿದರೆ ಅವರಿಗೂ ಸಹ ಉಚಿತ ಕಾನೂನು ನೆರವು ನೀಡಲಾಗುವುದು ಎಂದರು.
ಬಡವ, ಶ್ರೀಮಂತ ಎನ್ನದೆ ಎಲ್ಲ ವರ್ಗಗಳ ಜನರಿಗೆ ಉಚಿತವಾಗಿ ಕಾನೂನು ನೆರವು ನೀಡುವುದು ಸರ್ಕಾರದ ಉದ್ದೇಶ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮನಗೌಡ ಕೋಳಬಾಳ ಮನವಿ ಮಾಡಿದರು.
ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ, ವಕೀಲರ ಸಂಘದ ಕಾರ್ಯದರ್ಶಿ ವೀರೇಶ ಚಿಂಚಿರಕಿ, ಖಜಾಂಚಿ ವೀರಭದ್ರಗೌಡ, ಸಮಾಜ ಕಲ್ಯಾಣ ಅಧಿಕಾರಿ ಮಹಾಲಿಂಗಪ್ಪ, ಸ್ನೇಹಸಂಸ್ಥೆಯ ಸಹ ನಿರ್ದೇಶಕಿ ಕೆ.ಪಿ.ಜಯಾ ಕೂಡ್ಲಿಗಿ ಇದ್ದರು.
ಸ್ನೇಹಸಂಸ್ಥೆಯ ಜಿಲ್ಲಾ ಸಂಯೋಜಕಿ ಸರೋಜ ಹವಳದ, ದೇವದಾಸಿ ಮಹಿಳೆಯರ ಸ್ಥಿತಿಗತಿ ಕುರಿತು ಉಪನ್ಯಾಸ ನೀಡಿದರು.
ವೀರೇಶ ಸಜ್ಜನ್ ಪ್ರಾರ್ಥಿಸಿದರು. ಮಂಜುನಾಥ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದೇವದಾಸಿ ಮಹಿಳೆಯರು ಭಾಗವಹಿಸಿದ್ದರು.