ಮಸ್ಕಿ (ರಾಯಚೂರು ಜಿಲ್ಲೆ): ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಮೂರ್ಛೆ ಬಂದು ಮುಂದಿನ ಕಾರಿಗೆ ಡಿಕ್ಕಿ ಹೊಡೆದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗಮಧ್ಯೆಯೇ ಸಾವನ್ನಪ್ಪಿರುವ ಘಟನೆ ಮಸ್ಕಿ ಬಸ್ ನಿಲ್ದಾಣದ ಬಳಿ ಮಂಗಳವಾರ ನಡೆದಿದೆ.
ಲಿಂಗಸುಗೂರು ಪಟ್ಟಣ ನಿವಾಸಿ ಸದಾನಂದಪ್ಪ (52) ಮೃತ ವ್ಯಕ್ತಿ. ಲಿಂಗಸುಗೂರಿನಿಂದ ಬೆಂಗಳೂರಿಗೆ ಹಿಂತಿರುವಾಗ ಅಪಘಾತ ಉಂಟಾಗಿದೆ. ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದ ಸದಾನಂದಪ್ಪ ಅವರು, ಕಳೆದ ಬುಧವಾರ ತಾಯಿ ತೀರಿಕೊಂಡಿದ್ದರಿಂದ ಅಂತ್ಯಕ್ರಿಯೆಗಾಗಿ ಕುಟುಂಬಸಮೇತ ಬಂದಿದ್ದರು.
ಡಿಕ್ಕಿಯ ರಭಸಕ್ಕೆ ಮುಂದೆ ಸಂಚರಿಸುತ್ತಿದ್ದ ಕಾರಿನ ಹಿಂಬದಿ ನುಜ್ಜಾಗಿದೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.