ಲಿಂಗಸುಗೂರು: ಇಲ್ಲಿನ ಸ್ವಾಮಿ ವಿವೇಕಾನಂದ ನಗರದಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿದ ಹುಸೇನಸಾಬ ಅವರಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೀಪ ಪಾಟೀಲ ತೀರ್ಪು ನೀಡಿದ್ದಾರೆ.
2019 ರ ಸೆಪ್ಟೆಂಬರ್ನಲ್ಲಿ ಸ್ವಾಮಿ ವಿವೇಕಾನಂದ ನಗರದ ಸೊಹೇಲ್ ಅಹ್ಮದ್ ಎಂಬುವವರ ಮನೆಯ ಅಲ್ಮಾರದಲ್ಲಿದ್ದ 23.5 ತೊಲಾ ಚಿನ್ನಾಭರಣ ಕಳ್ಳತನವಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಸಿಪಿಐಗಳಾದ ಯಶವಂತ ಬಿಸ್ನಳ್ಳಿ, ದೀಪಕ್ ಭೂಸರೆಡ್ಡಿ, ಮಹಾಂತೇಶ ಸಜ್ಜನ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಕಳ್ಳತನ ಸಾಬೀತಾಗಿದ್ದರಿಂದ ಮುದಗಲ್ ಪಟ್ಟಣದ ಆರೋಪಿ ಹುಸೇನಸಾಬ ಅವರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ.
ದಂಡದ ಹಣದಲ್ಲಿ ₹10 ಸಾವಿರ ದೂರುದಾರ ಸೊಹೆಲ್ ಅಹ್ಮದ್ ಅವರಿಗೆ ನೀಡಬೇಕು ಎಂದು ಆದೇಶಿಸಲಾಗಿದೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ವಾದ ಮಂಡಿಸಿದ್ದರು.