ರಾಯಚೂರು: ಸಮಾಜದಲ್ಲಿ ಮಾನಸಿಕ ರೋಗದ ಬಗ್ಗೆ ಇರುವ ಮೂಡನಂಬಿಕೆಗಳು ಮತ್ತು ಕಳಂಕವನ್ನು ನಿರ್ಮೂಲನೆ ಮಾಡಿ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನುಧಿಕಾರಿ ಡಾ.ನಂದಿತಾ ಎಂ.ಎನ್. ಹೇಳಿದರು.
ವಿಶ್ವ ಸ್ಕಿಜೋಪ್ರೀನಿಯಾ ದಿನ ಅಂಗವಾಗಿ ವೀರಶೈವ ಶಿಕ್ಷಣ ಮಹಾವಿದ್ಯಾಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸ್ಕಿಜೋಪ್ರೀನಿಯಾ ಛಿದ್ರಮನಸ್ಕತೆ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಛಿದ್ರಮನಸ್ಕತೆ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಮನೋವೈದ್ಯ ಡಾ. ಮನೋಹರ್ ವೈ. ಪತ್ತಾರ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೇ 1 ರಷ್ಟು ಜನರು ಸ್ಕಿಜೋಪ್ರೀನಿಯಾ ರೋಗಕ್ಕೆ ಒಳಗಾಗುತ್ತಾರೆ. ಸಾಮಾನ್ಯವಾಗಿ 15-35ರ ವಯೋಮಾನದವರು ಸ್ಕಿಜೋಪ್ರೀನಿಯಾ ರೋಗಕ್ಕೆ ಒಳಗಾಗುತ್ತಾರೆ. ವರ್ತನೆಯಲ್ಲಿ ಬದಲಾವಣೆ, ರಾಜಭ್ರಮೆಗಳು, ವಿಭ್ರಮೆಗಳು ಮತ್ತು ಇತರೆ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಸಲಹೆ ಹಾಗೂ ಚಿಕಿತ್ಸೆ ಪಡೆಯಬಹುದು ಅಥವಾ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಮನೋವೈದ್ಯ ವಿಭಾಗ ರಿಮ್ಸ್ ಆಸ್ಪತ್ರೆಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ವೀರಶೈವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಮಂಜುಳಾ ಮಾತನಾಡಿ, ಇಂತಹ ಕಾರ್ಯಕ್ರಮಗಳು ಇಂದಿನ ದಿನಮಾನಗಳಲ್ಲಿ ಅತ್ಯಂತ ಉಪಯುಕ್ತವಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಛಿದ್ರಮನಸ್ಕತೆಯ ಕುರಿತು ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ವಿಭಾಗದ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಆಶು-ಭಾಷಣ ಏರ್ಪಡಿಸಲಾಗಿತ್ತು. ಪ್ರಥಮ ಸ್ಥಾನವನ್ನು ರುಬೀನಾ ಸಮ್ರಿನ್, ದ್ವಿತಿಯ ಸ್ಥಾನವನ್ನು ಸುಪ್ರಿಯಾ ಜಿ.ವಿ ಹಾಗೂ ತೃತೀಯ ಸ್ಥಾನವನ್ನು ಮಂಜುನಾಥ ಅವರು ಪಡೆದರು.
ಮಾನಸಿಕ ವಿಭಾಗದ ಆಪ್ತ ಸಮಾಲೋಚಕರಾದ ಸುವರ್ಣ, ಅನ್ನಪೂರ್ಣ, ಮೃತ್ಯುಂಜಯ, ಹರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.