ಲಿಂಗಸುಗೂರು: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕ್ಷಯ ರೋಗ ಸೋಲಿಸಿ ರಾಯಚೂರು ಗೆಲ್ಲಿಸಿ‘ ಅಭಿಯಾನ ಕಾರ್ಯಕ್ರಮವನ್ನು ಮುಖಾಮುಖಿ ಜಾನಪದ ಕಲಾ ತಂಡದವರು ಬೀದಿ ನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾತನಾಡಿ, ‘ಕ್ಷಯರೋಗದ ಲಕ್ಷಣ ಕಂಡು ಬಂದಲ್ಲಿ ತಕ್ಷಣವೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಫ ತಪಾಸಣೆ ಮಾಡಿಸಿಕೊಳ್ಳಬೇಕು. ಸಾಂಕ್ರಾಮಿಕವಾಗಿ ಹರಡುವ ಈ ರೋಗ ತಡೆಯಲು ತಮ್ಮಗಳ ಸಹಕಾರ ಅವಶ್ಯಕವಾಗಿದೆ’ ಎಂದು ಸಲಹೆ ನೀಡಿದರು.
ವೈದ್ಯ ಡಾ. ರುದ್ರಗೌಡ ಪಾಟೀಲ ಮಾತನಾಡಿ, ‘ಕ್ಷಯರೋಗ ಸಮಾಜಕ್ಕೆ ಅಂಟಿದ ಶಾಪವಾಗಿದೆ. ಇದರೊಟ್ಟಿಗೆ ಕೋವಿಡ್, ಓಮೈಕ್ರಾನ್ ಸೇರಿದಂತೆ ವಿವಿಧ ಬಗೆಯ ರೋಗಗಳು ಹರಡುತ್ತಿವೆ. ಜನತೆ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು. ರೋಗಗ ಲಕ್ಷಣ ಕಂಡುಬಂದಲ್ಲಿ ತಕ್ಷಣವೆ ಚಕಿತ್ಸೆ ಪಡೆದುಕೊಳ್ಳಬೇಕು’ ಎಂದರು.
ಆರೋಗ್ಯ ಶಿಕ್ಷಣ ಅಧಿಕಾರಿ ಪ್ರಾಣೇಶ ಜೋಷಿ, ಮೋಹಿನ್ಪಾಷ, ರವಿಕುಮಾರ ಹೂಗಾರ, ಮಹಾಂತೇಶ ಬ್ಯಾಳಿ, ಅಮರೇಶ ಎಲಿಗಾರ ಹಾಗೂ ಜಾನಪದ ಕಲಾ ತಂಡದ ಕಲಾವಿದರು ಇದ್ದರು.