ರಾಯಚೂರು: ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾ ಘಟಕದ ಹಂಗಾಮಿ ಅಧ್ಯಕ್ಷ ಶರಣಪ್ಪ ಮರಳಿ ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ವರ್ಷಗಳಿಂದ ಬರದಿಂದ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಪ್ರವಾಹದಿಂದ ಬದುಕು ಕೊಚ್ಚಿಕೊಂಡು ಹೋದಂತಾಗಿದೆ. ಆದರೆ, ಕೇಂದ್ರ ಸರ್ಕಾರ ನೆರೆ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ರಾಜ್ಯದಲ್ಲಿ ಪ್ರವಾಹದಿಂದಾದ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತಂದು, ರಾಷ್ಟ್ರೀಯ ವಿಪತ್ತು ಘೋಷಣೆ ಹಾಗೂ ಹೆಚ್ಚಿನ ನೆರವಿಗೆ ಒತ್ತಾಯ ಮಾಡಬೇಕಾಗಿತ್ತು. ಆದರೆ, ಸ್ವಲ್ಪ ಪ್ರಮಾಣದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಹಣದಿಂದ ಜನರ ಬದುಕು ಕಟ್ಟಿಕೊಡಲು ಸಾಧ್ಯವಾಗುವುದಿಲ್ಲ ಎಂದು ದೂರಿದರು.
ಪ್ರವಾಹ ಪರಿಸ್ಥಿತಿ ಇಳಿಮುಖವಾಗಿದ್ದರಿಂದ ಬೆಳೆಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ಪರಿಹಾರ ನೀಡಬೇಕು. ಜಮೀನಿನಲ್ಲಿ ಉಂಟಾಗಿರುವ ಮಣ್ಣಿನ ಸವಕಳಿಗೂ ನೆರವು ಒದಗಿಸಬೇಕು. ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸಬೇಕು. ಪ್ರವಾಹ ಬಂದರೂ ಜನರಿಗೆ ತೊಂದರೆಯಾಗದಂತೆ ಪ್ರವಾಹ ಪೀಡಿತ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
ಉಮಾದೇವಿ ನಾಯಕ, ರಾಮಪ್ಪ ಜವಳಗೇರಾ, ಮಲ್ಲಿಕಾರ್ಜುನ, ಹನುಮಂತ, ನರಸಣ್ಣ, ಬಸವರಾಜ ಪತ್ರಿಕಾಗೋಷ್ಠಿಯಲ್ಲಿ ಇದ್ದರು.