ರಾಯಚೂರು: ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಆಸ್ತಿ ನಷ್ಟಕ್ಕೆ ಕಾರಣವಾಗುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು. ಹಲ್ಲೆಗಳನ್ನು ತಡೆಯಲು ಟಾಸ್ಕ್ಫೋರ್ಸ್ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಯಲ್ಲಿ ಕೆಲವು ಬದಲಾವಣೆ ಮಾಡಬೇಕು. ಹತ್ತು ವರ್ಷಗಳಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಗಳಿಂದ ವೈದ್ಯರು ವೃತ್ತಿ ಬಿಡುವಂತಹ ಸ್ಥಿತಿಗೆ ಬಂದಿದ್ದಾರೆ. ಗಂಭೀರ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆ ನೀಡದಂತಹ ಪರಿಸ್ಥಿತಿಯಿದೆ ಎಂದರು.
ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳು ದೇಶ ಬಿಟ್ಟು ಹೋಗುತ್ತಿವೆ. ಸೂಪರ್ ಸ್ಪೇಷಾಲಿಟಿ ಕೋರ್ಸ್ಗಳಿಗೆ ಈಚೆಗೆ ನಡೆದ ಪರೀಕ್ಷೆಗೆ ವಿದ್ಯಾರ್ಥಿಗಳೇ ಇಲ್ಲದಂತಾಗಿತ್ತು. ವೈದ್ಯರು ತಮ್ಮ ಮಕ್ಕಳನ್ನು ಈ ವೃತ್ತಿಗೆ ತರಲು ಹಿಂಜರಿಯುವಂತಾಗಿದೆ. ಆದ್ದರಿಂದ ವೈದ್ಯರ ರಕ್ಷಣೆಗೆ ಕಠಿಣ ಕಾನೂನು ಮಾಡಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಡಾ.ಬಿ.ಮಹಾಲಿಂಗಪ್ಪ, ಡಾ.ಅನಿರುದ್ಧ ಕುಲಕರ್ಣಿ, ಡಾ.ಶ್ರೀಧರ ವೈಟ್ಲಾ, ಡಾ.ಖಲೀಮ್ ಬಹದ್ದೂರ, ಡಾ.ವಿರೂಪಾಕ್ಷಪ್ಪ, ಶ್ರೀಹರ್ಷಾ ಪಾಟೀಲ ಇದ್ದರು.