ರಾಯಚೂರು: ಇಎಫ್ಎಂಎಸ್ ವೇತನದಿಂದ ಕೈಬಿಟ್ಟ ಗ್ರಾಮ ಪಂಚಾಯಿತಿ ನೌಕರರ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಮೂಲಕ ಆರ್ಡಿಪಿಆರ್ ಇಲಾಖೆಗೆ ಮಾಹಿತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ನೌಕರರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.
ಬಾಕಿ ಉಳಿದ ವೇತನವನ್ನು ನೀಡಲು ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಎಸ್ಸೆಸ್ಸೆಲ್ಸಿ ಪಾಸಾದ ಕರವಸೂಲಿಗಾರರಿಗೆ ಗ್ರೇಡ್–2 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕು. ಆರೋಗ್ಯ ಕಾರ್ಡ್ ಒದಗಿಸಬೇಕು. ವಾಟರ್ಮ್ಯಾನ್ಗಳು ಭಾನುವಾರ ಮತ್ತು ರಜಾ ದಿನ ಕೆಲಸ ನಿರ್ವಹಿಸಿದ್ದಕ್ಕೆ ಹೆಚ್ಚುವರಿ ವೇತನ ನೀಡಬೇಕು. ಕರವಸೂಲಿಗಾರರನ್ನು ವಜಾಗೊಳಿಸುವ ಆದೇಶವನ್ನು ಜಿಲ್ಲಾ ಪಂಚಾಯಿತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನೌಕರರ ವೇತನ ನೀಡಲು ಒಪ್ಪಿಕೊಂಡು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ ಹದಿನೈದು ದಿನಗಳಲ್ಲಿ ಸಿಬ್ಬಂದಿ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿಗೆ ನೀಡಲು ಆದೇಶದಲ್ಲಿ ತಿಳಿಸಿದ್ದರೂ, ಇದುವರೆಗೆ ಮಾಹಿತಿಯನ್ನು ನೀಡಿಲ್ಲ. ವೇತನವಿಲ್ಲದೇ ನೌಕರರು ಕುಟುಂಬ ನಡೆಸುವುದು ಕಷ್ಟವಾಗಿದೆ ಎಂದು ಆರೋಪಿಸಿದರು.
ಅಧ್ಯಕ್ಷ ಮಹಾದೇವಪ್ಪ ಜಂಬಲದಿನ್ನಿ, ಮಲ್ಲಿಕಾರ್ಜುನ ಮನ್ಸಲಾಪುರ, ಎಚ್.ಪದ್ಮಾ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಕೆ.ನಾರಾಯಣ, ಶ್ರೀನಿವಾಸ, ಲಿಂಗಪ್ಪ, ಸುರೇಶ, ಹನುಮಂತಪ್ಪ, ಶಾಂತ ನರಸಣ್ಣ, ನಾಗೇಂದ್ರ, ಮಹಾದೇವ, ಬಸ್ಸಯ್ಯಸ್ವಾಮಿ ಇದ್ದರು.