ರಾಯಚೂರು: ಪೌರ ಕಾರ್ಮಿಕರ ಬಾಕಿ ವೇತನ ಪಾವತಿಸದ ನಗರಸಭೆಯ ವಿರುದ್ಧ ಆಕ್ರೋಶಗೊಂಡ ಕಾರ್ಮಿಕರು ಕರ್ನಾಟಕ ರಾಜ್ಯ ಪೌರಸೇವಾ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಗರಸಭೆ ಕಚೇರಿಯ ಎದುರಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
ಆರು ತಿಂಗಳಿನಿಂದ ಕಾರ್ಮಿಕರ ವೇತನ ಪಾವತಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ವೇತನ ಪಾವತಿಗೆ ಕ್ರಮ ಜರುಗಿಸದೇ ಕಾರ್ಮಿಕರ ಜೀವನದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಾಕಿ ವೇತನ ಪಾವತಿಗಾಗಿ ಸರದಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಾಗ ಶೀಘ್ರ ವೇತನ ಪಾವತಿಸಲಾಗುವುದು ಎಂದು ಪೌರಾಯುಕ್ತರು ನೀಡಿದ ಭರವಸೆಯ ಮೇರೆಗೆ ಹೋರಾಟ ಹಿಂಪಡೆಯಲಾಗಿತ್ತು. ಆದರೆ, ಹೋರಾಟ ಹಿಂಪಡೆದು 10 ದಿನಗಳು ಕಳೆದರೂ ಇದುವರೆಗೆ ವೇತನ ಪಾವತಿಗೆ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹರಿಜನವಾಡ ಬಡಾವಣೆಯ ಕಂಚು ಮಾರೆಮ್ಮ ದೇವಿಯ ಜಾತ್ರಾ ಮಹೋತ್ಸವ ಜೂನ್ 11ರಿಂದ ಆರಂಭಗೊಳ್ಳಲಿದ್ದು, ವೇತನ ನೀಡದ ಪರಿಣಾಮ ಜಾತ್ರೆಯ ಸಿದ್ಧತೆಗಳು ಮಾಡಿಕೊಂಡಿಲ್ಲ. ವೇತನ ನೀಡಬೇಕಾದ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಘಟಕ ಅಧ್ಯಕ್ಷ ಎಸ್.ಮಾರೆಪ್ಪ, ಜಿಲ್ಲಾ ಘಟಕ ಅಧ್ಯಕ್ಷ ಉರುಕುಂದಪ್ಪ ನೇತೃತ್ವ ವಹಿಸಿದ್ದರು.