ರಾಯಚೂರು: ಅಂಚೆ ಕಚೇರಿ ನೌಕರರ ಗ್ರ್ಯಾಚ್ಯುಟಿ ಹೆಚ್ಚಳ ಮಾಡಿ ಕಮಲೇಶ ಚಂದ್ರ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಸದಸ್ಯರು ನಗರದ ಅಂಚೆ ಕಚೇರಿ ಮುಂದೆ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
ಸರ್ಕಾರಗಳು ಗ್ರಾಮೀಣ ಅಂಚೆ ನೌಕರರ ವೇತನ ಹೆಚ್ಚಳ ಮಾಡುತ್ತಿಲ್ಲ. ಅಗತ್ಯ ಸೌಕರ್ಯಗಳನ್ನು ಒದಗಿಸದೇ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರ್ಷಕ್ಕೆ 30 ದಿನಗಳ ರಜೆ ಒದಗಿಸಬೇಕು. ಈ ರಜೆಗಳ 180 ದಿನಗಳನ್ನು ನೌಕರರ ಖಾತೆ ಜಮಾ ಮಾಡಿ, ನಿವೃತ್ತಿ ಹೊಂದುವಾಗ 6ತಿಂಗಳ ವೇತನ ಸಹಿತ ರಜೆ ನೀಡುವುದು 7ನೇ ವೇತನ ಆಯೋಗದ ವರದಿಯಲ್ಲಿ ಅಳವಡಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ₹6 ಸಾವಿರ ನೀಡಬೇಕು. ಹಿರಿಯ ನೌಕರರಿಗೆ ವಿಶೇಷ ಭತ್ಯೆಯನ್ನು ₹2 ಸಾವಿರಕ್ಕೆ ಹೆಚ್ಚಿಸಬೇಕು. ಅಂಚೆ ಕಚೇರಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ನಡೆಸಬೇಕು. ಗ್ರಾಚ್ಯುಟಿ ಹಣವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ಹನುಮಂತಪ್ಪ, ನರಸಿಂಹಾಚಾರ್ಯ, ಮೆಹಬೂಬ, ಚಿತ್ರಶೇಖರ, ಚನ್ನಾರೆಡ್ಡಿ, ತಿಮ್ಮಪ್ಪ, ರಮೇಶ, ಗೋಪಾಲ, ಬಲವಂತ ರೆಡ್ಡಿ, ಭೀಮಪ್ಪ, ಅಬ್ದುಲ್ ಖಾದರ್, ಎಮನೂರು ಸಾಬ್ ಇದ್ದರು.