ರಾಯಚೂರು: ಗಣೇಕಲ್ ಜಲಾಶಯಕ್ಕೆ ನಾರಾಯಣಪುರ ಬಲದಂಡೆ ಕಾಲುವೆ (ಎನ್ಆರ್ಬಿಸಿ) ಸಂಪರ್ಕ ಕಲ್ಪಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು. ಕಾಲುವೆ ಕೊನೆಭಾಗದ ರೈತರನ್ನು ನೀರಿನಿಂದ ಶಾಶ್ವತ ವಂಚಿತರನ್ನಾಗಿ ಮಾಡುವ ಹುನ್ನಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ರಾಯಚೂರು ತಾಲ್ಲೂಕು ಕೃಷ್ಣ ಬಲದಂಡೆ ಕಾಲುವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಬಸಪ್ಪ ಮಾಲಿಪಾಟೀಲ ಹೇಳಿದರು.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ರಾಯಚೂರು ತಾಲ್ಲೂಕು ಕೃಷ್ಣ ಬಲದಂಡೆ ಕಾಲುವೆ ಹಿತರಕ್ಷಣಾ ಸಮಿತಿಯಿಂದ ಸೋಮವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದರು.
ರಾಯಚೂರು ನಗರರಕ್ಕೆ ಕುಡಿಯುವ ನೀರು ಒದಗಿಸಬೇಕು ಎನ್ನುವ ನೆಪದಲ್ಲಿ ಕಾಲುವೆಯ 106 ಕಿಲೋ ಮೀಟರ್ ಲಿಂಕ್ ಕಾಲುವೆ ನಿರ್ಮಿಸಲು ಕೆಲವು ರಾಜಕಾರಣಿಗಳು ಪ್ರಭಾವ ಬೀರುತ್ತಿದ್ದಾರೆ. ಈ ವಿಷಯದಲ್ಲಿ ಯಾವುದೇ ರೈತರ ಸಮ್ಮತಿಯಿಲ್ಲ ಎಂದರು.
ಎನ್ಆರ್ಬಿಸಿ ನಿರ್ಮಾಣ ಮಾಡಿದ ಮೂಲ ಯೋಜನೆಯನ್ನು ಬದಲಾಯಿಸಲಾಗುತ್ತಿದೆ. ಇದರಿಂದ ರಾಯಚೂರು ತಾಲ್ಲೂಕಿನ 80 ಗ್ರಾಮಗಳ 1.6 ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಡುವ ಜಮೀನಿನ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ನೀರಾವರಿ ಇಲ್ಲದೆ ಕಂಗಾಲಾಗಿರುವ ರೈತರಿಗೆ ಎನ್ಆರ್ಬಿಸಿ ವರದಾನವಾಗಿದೆ. ಎಂದು ತಿಳಿಸಿದರು.
ಆಡಳಿತಾತ್ಮಕ ಮತ್ತು ತಾಂತ್ರಿಕ ದೋಷದಿಂದ ಈ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. ಆದರೆ, ರಾಜಕಾರಣಿಗಳು ಪ್ರಭಾವ ಬೀರಿ ರಾಂಪೂರ ಜಲಾಶಯಕ್ಕೆ ನೀರು ತರುವ ಪ್ರಯತ್ನ ಮಾಡುತ್ತಿದ್ದಾರೆ. ರಾಯಚೂರು ನಗರದಲ್ಲಿ 24/7 ನೀರು ಸಂಪರ್ಕ ಕಲ್ಪಿಸಲು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಕಾಲುವೆ ಸಂಪರ್ಕ ಕಲ್ಪಿಸಿದರೆ ಈ ಭಾಗಕ್ಕೆ ಸಿಗಬೇಕಾದ 4 ಟಿಎಂಸಿ ನೀರಿನಿಂದ ವಂಚಿತರಾಗಬೇಕಾಗುತ್ತದೆ ಎಂದು ಹೇಳಿದರು.
ನೀರಾವರಿ ತಜ ಹನುಮನಗೌಡ ಬೆಳಕುರ್ಕಿ, ಸಿದ್ದನಗೌಡ, ಷಣ್ಮುಖಪ್ಪ, ಚನ್ನಬಸವಣ್ಣ, ಜಿ. ಗೋಪಾಲರೆಡ್ಡಿ ಇದ್ದರು.