ರಾಯಚೂರು: ಹಿಂದಿ ದಿವಸ್ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಸದಸ್ಯರು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಗಾಂಧಿ ಪ್ರತಿಮೆ ಎದುರು ಶನಿವಾರ ಕರಾಳ ದಿನಆಚರಿಸಿದರು.
ವೈವಿಧ್ಯತೆಯಿಂದ ಕೂಡಿರುವ ದೇಶವಾಗಿರುವ ಭಾರತದಲ್ಲಿ ಎಲ್ಲ ಭಾಷೆಗಳಿಗೆ ಸಮಾನ ಗೌರವ ಲಭಿಸಿದಾಗ ವೈವಿಧ್ಯತೆ ಉಳಿಯಲು ಸಾಧ್ಯವಾಗಲಿದೆ. ಆದರೆ, ಕೇಂದ್ರ ಸರ್ಕಾರ ಹಿಂದಿ ಹೆಚ್ಚಿನ ಸ್ಥಾನಮಾನ ನೀಡುವ ಮೂಲಕ ವೈವಿಧ್ಯತೆಗೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿದರು.
ಹಿಂದಿ ರಾಷ್ಟ್ರೀಯ ಭಾಷೆಯೆಂದು ಯಾವ ಕಾನೂನು ಇಲ್ಲವಾಗಿದ್ದು, ಹಿಂದಿ ರಾಷ್ಟ್ರೀಯ ಭಾಷೆಯೆಂದು ಸುಳ್ಳು ಹೇಳುತ್ತಾ ಬರಲಾಗಿದೆ. 2006ರಿಂದಲೂ ಹಿಂದಿ ಹೇರಿಕೆ ಖಂಡಿಸಿ ಹೋರಾಟ ಮಾಡಲಾಗುತ್ತಿದ್ದು, ಹಿಂದಿ ದಿವಸ್ ಆಚರಣೆ ಮೂಲಕ ಪರೋಕ್ಷವಾಗಿ ಒತ್ತಡ ಹೇರಲಾಗುತ್ತಿದೆ. ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ವ್ಯವಹಾರದಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಹಿಂದಿ ದಿವಸ್ ಆಚರಣೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ವಿನೋದರೆಡ್ಡಿ, ಕೊಂಡಪ್ಪ, ಚಂದ್ರು, ಚಾಂದಪಾಷ, ಸಾಧಿಕ್, ವಿರೂಪಾಕ್ಷ ಇದ್ದರು.