ರಾಯಚೂರು:ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಂದ ಜನರು ನಗರ ತಲುಪುವುದಕ್ಕೆ ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶವು ಅಭಿವೃದ್ಧಿ ಆಗಬೇಕಾದರೆ ಯರಗೇರಾವನ್ನು ನೂತನ ತಾಲ್ಲೂಕು ಕೇಂದ್ರವೆಂದು ಘೋಷಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಸಿಮ್ ನಾಯಕ್ ಹೇಳಿದರು.
ತಾಲ್ಲೂಕಿನ ಯರಗೇರಾ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಯರಗೇರಾ ತಾಲ್ಲೂಕು ಸಮಿತಿ ರಚನೆ ಕುರಿತ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ಈ ಭಾಗದಲ್ಲಿ ಸರ್ಕಾರದ ಅನುದಾನ ಮತ್ತು ಯೋಜನೆಗಳ ಸಮರ್ಪಕವಾಗಿ ಬಳಕೆ ಯಾಗಬೇಕಾದರೆ ಯರಗೇರಾ ತಾಲ್ಲೂಕು ಕೇಂದ್ರ ಆಗಬೇಕು. ಅಲ್ಲದೆ ಈ ಪ್ರದೇಶ ಆಂಧ್ರಪ್ರದೇಶದ ಗಡಿ ಭಾಗವಾಗಿದ್ದು ಕನ್ನಡ ಅಭಿವೃದ್ಧಿ, ಗ್ರಾಮಗಳ ಅಭಿವೃದ್ಧಿಗೆ ಯರಗೇರಾ ಗ್ರಾಮವು ತಾಲ್ಲೂಕು ಕೇಂದ್ರವಾಗುವುದು ಅತಿ ಅವಶ್ಯಕವಿದೆ ಎಂದು ತಿಳಿಸಿದರು.
ಮುಖಂಡ ಎಂ.ಡಿ. ನಿಜಾಮುದ್ದಿನ್ ಮಾತನಾಡಿ, ರಾಯಚೂರು ನಗರ ಮತ್ತು ಗ್ರಾಮೀಣಕ್ಕೆ ತಾಲ್ಲೂಕು ಮಟ್ಟದ ಒಂದೇ ಕಚೇರಿಗಳಿದ್ದು, ಜನಸಾಮಾನ್ಯರಿಗೆ ಕೆಲಸಗಳಿಗೆ ಮತ್ತು ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂದರು.
ಯರಗೇರಾ ಗ್ರಾಮವು ತಾಲ್ಲೂಕಾದರೆ ಈ ಭಾಗದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈಗಾಗಲೇ ತಾಲ್ಲೂಕಿನ ಅವಶ್ಯಕತೆ ಬಗ್ಗೆ ಜನರಿಗೆ ಮಾಹಿತಿ ಮತ್ತು ಜಾಗೃತಿ ನೀಡಲಾಗುತ್ತಿದೆ. ಎಲ್ಲಾ ಗ್ರಾಮ ಪಂಚಾಯತಿಗಳ ಸಭೆಗಳಲ್ಲಿ ಯರಗೇರಾ ತಾಲ್ಲೂಕು ಕೇಂದ್ರ ಮಾಡುವಂತೆ ನಿರ್ಣಯವನ್ನು ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಸಚಿವರಿಗೆ. ಶಾಸಕರಿಗೆ ಮತ್ತು ಸಂಸದರಿಗೆ ಮನವಿ ನೀಡುಬೇಕು. ತಾಲ್ಲೂಕು ರಚನೆಗೆ ಬೇಕಾದ ಅವಶ್ಯಕತೆಗಳನ್ನು ಪೂರೈಕೆಗೆ ಪಕ್ಷಬೇದ ಮರೆತು ಮರೆತು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.