ರಾಯಚೂರು: ಮತಾಂತರ ನಿಷೇಧ ಕಾಯ್ದೆಗಳನ್ನು ರದ್ದುಪಡಿಸಬೇಕು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶಿಸಿರುವ ಕ್ರೈಸ್ತ ಸಮುದಾಯದ ಚರ್ಚುಗಳ ಗಣತಿ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಮೆಥೋಡಿಸ್ಟ್ ಚರ್ಚ್ ಪಾಸ್ಟರ್ ಅವರ ನೇತೃತ್ವದಲ್ಲಿ ವಿವಿಧ ಚರ್ಚಗಳ ಪಾದ್ರಿಗಳು ಹಾಗೂ ಕ್ರೈಸ್ತ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕ್ರೈಸ್ತ ಸಮುದಾಯ ಯಾವುದೇ ಆಸೆ ಆಮಿಷಗಳನ್ನೊಡ್ಡಿ ಮತಾಂತರ ಮಾಡುತ್ತಿಲ್ಲ. ಧರ್ಮಶಾಸ್ತ್ರದಲ್ಲಿ ತಿಳಿಸಿದಂತೆ ಜನರನ್ನು ಸನ್ಮಾರ್ಗದಲ್ಲಿ ನಡೆಸಲು ಜೀವನದ ಮಾರ್ಗದರ್ಶನ ನೀಡುತ್ತಿದೆ. ಈಚೆಗೆ ಕೆಲವು ಕಡೆಗಳಲ್ಲಿ ಮೂಲಭೂತವಾದಿಗಳ ಪ್ರಚೋದನೆಯಿಂದ ಹಲವು ಪುಂಡರು ಪ್ರಾರ್ಥನಾ ಸ್ಥಳಗಳಿಗೆ ನುಗ್ಗಿ ವಿದ್ವಂಸಕ ಕೃತ್ಯ ಎಸಗಿದ್ದಾರೆ. ಅಲ್ಲಿರುವ ಭಕ್ತರನ್ನು ಥಳಿಸಿ ಅವರ ಮೇಲೆ ದೌರ್ಜನ್ಯವೆಸಗಿ ಸುಳ್ಳು ಆರೋಪಗಳನ್ನು ದಾಖಲಿಸಿ ಕ್ರೈಸ್ತ ಸಮುದಾಯ ಶಾಂತಿ ಕದಡಿಸುತ್ತಿದ್ದಾರೆ ಎಂದು ದೂರಿದರು.
ಚರ್ಚ್ ಹಾಗೂ ಸಂಘ, ಸಂಸ್ಥೆಗಳಿಗೆ, ಮಿಷನರಿಗಳಿಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರ ಆದೇಶ ಹೊರಡಿಬೇಕು ಹಾಗೂ ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಧಾರ್ಮಿಕ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿ ಒತ್ತಾಯಪೂರ್ವಕವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿಲ್ಲ. ಇಂತಹ ಪ್ರಕರಣ ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಮೆಥೋಡಿಸ್ಟ್ ಚರ್ಚ್ ನ ಜಿಲ್ಲಾ ಮೇಲ್ವಿಚಾರಕ ರೆ. ಎ.ಸಿಮೆಯೋನ್, ಡಾ.ವರಪ್ರಸಾದ, ಎನ್.ಜರ್ನಸ್ ಜೇಮ್ಸ್, ಎ.ಜೋಸೆಫ್, ಎಸ್.ಡಿ ಹನೋಕ್ ಮುಖಂಡರು ಇದ್ದರು.