ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 150 ರಷ್ಟು ಪ್ರತಿಭಟನಾಕಾರರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸಿದ ಪೊಲೀಸರ ಕ್ರಮ ಎಲ್ಲಾ ಅನಾಹುತಗಳಿಗೆ ಕಾರಣ. ಗಂಭೀರ ಗಾಯಗೊಂಡ ಹಲವು ಮಂದಿ ಮಂಗಳೂರು ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯೊಳಗೆ ಆಶ್ರುವಾಯು ಸಿಡಿಸಿರುವುದು ಹಾಗೂ ಪೊಲೀಸರು ಆಸ್ಪತ್ರೆಯ ಐಸಿಯು ಘಟಕದ ಬಾಗಿಲನ್ನು ಮುರಿದು ಒಳ ನುಗ್ಗಿ ಅಲ್ಲಿದ್ದ ವೈದ್ಯರು, ನರ್ಸ್ಗಳಿಗೂ ಲಾಠಿ ಬೀಸಿರುವುದು ಕೂಡಾ ಮಂಗಳೂರಿನ ಪೊಲೀಸರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಪೊಲೀಸರ ಕ್ರೌರ್ಯ ಮನಸ್ಥಿತಿ ಎಷ್ಟು ಮಿತಿಮೀರಿದೆ ಎನ್ನುವುದಕ್ಕೆ ಸಂಬಂಧಪಟ್ಟ ಕೆಲವು ವಿಡಿಯೋ ದೃಶ್ಯಗಳೇ ಸಾಕ್ಷಿ ಎಂದರು.