ರಾಯಚೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗ್ರಾಮಗಳಾದ ಮಂತ್ರಾಲಯ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಕನ್ನಡ ಚಳವಳಿ ಸೈನ್ಯ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಅವರು, ಆಂಧ್ರಪ್ರದೇಶದ ಮಾಜಿ ಶಾಸಕ ಪಲಕುರತಿ ತಿಕ್ಕರೆಡ್ಡಿ ಹೇಳಿಕೆ ಆಧಾರದ ಮೇಲೆ ಮಂತ್ರಾಲಯದ ಸುತ್ತಮುತ್ತಲಿನ ಗ್ರಾಮಗಳು ಕನ್ನಡದ ಗಡಿ ಗ್ರಾಮಗಳಾಗಿದ್ದು, ಕನ್ನಡಿಗರೆ ಹೆಚ್ಚಾಗಿರುವ ಈ ಪ್ರದೇಶಗಳನ್ನು ರಾಜ್ಯಕ್ಕೆ ಸೇರ್ಪಡಿಸಬೇಕು. ಕರ್ನಾಟಕಕ್ಕೆ ಹತ್ತಿರವಿರುವ ಕಾರಣ ಈ ಭಾಗದ ಜನತೆಗೆ ತಮ್ಮನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡರೆ ಅನುಕೂಲವಾಗುತ್ತದೆ ಎಂದು ಸ್ವತಃ ಆ ಭಾಗದವರು ಒತ್ತಾಯಿಸುತ್ತಿದ್ದಾರೆ ಎದು ತಿಳಿಸಲಾಯಿತು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಅಮರೇಶ್ವರ ಪಾಟೀಲ್ ಆಲ್ಕೋಡ, ಚೆನ್ನಪ್ಪಗೌಡ ಆಲ್ಕೋಡ, ವೀರೇಶ್ ಹಿರಾ, ಕೆ. ರಾಘವೇಂದ್ರ, ವಿನಯ್ ಕುಮಾರ್, ಇಮ್ರಾನ, ರಾಮು, ಮಾಳಿಂಗರಾಯ, ಮಾರುತಿ, ಆಂಜನೇಯ ಇದ್ದರು.