ರಾಯಚೂರು: ಮೂರು ತಿಂಗಳಿನಿಂದ ಬಾಕಿ ಇರುವ ನೌಕರರ ವೇತನ, ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಮತ್ತು ಜೂನ್ದಿಂದ ಆಗಸ್ಟ್ವರೆಗೆ ಮುಂಗಡವಾಗಿ ತರಕಾರಿ ಬಿಲ್ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರಾಯಚೂರು ತಾಲ್ಲೂಕು ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ವೇತನವಿಲ್ಲದೇ ಕೇಂದ್ರಗಳ ಬಾಡಿಗೆ ಹಣವಿಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಪ್ರತಿವರ್ಷ ಮಾರ್ಚ್ನಿಂದ ಮೇ ತಿಂಗಳ ತನಕ ಈ ರೀತಿಯ ಸಮಸ್ಯೆ ಆಗುತ್ತದೆ. ಆದರೆ ಈ ವರ್ಷ ಜೂನ್ ತಿಂಗಳಾದರೂ ಗೌರವಧನ ಪಾವತಿ ಮಾಡುತ್ತಿಲ್ಲ. ಕಾರಣ ಕೇಳಿದರೆ ಅನುದಾನ ಇಲ್ಲವೆಂದು ಹೇಳುತ್ತಿದ್ದಾರೆ. ಕೇಂದ್ರ ಕಚೇರಿಯಲ್ಲಿ ಕೇಳಿದರೆ ವೇತನ ಪಾವತಿ ಮಾಡುವ ವಿಧಾನ ಬದಲಾವಣೆ ಆಗಿದೆ ಎಂದು ಹೇಳುತ್ತಿದ್ದಾರೆ.
ಅಂಗನವಾಡಿ ನೌಕರರು ಇನ್ನು ಎಷ್ಟು ತಾಳ್ಮೆಯಿಂದ ವರ್ತಿಸಬೇಕು. ಮಾದರಿ ಆಡಳಿತ ನೀಡುವ ಸರ್ಕಾರಗಳೇ ಅನುದಾನದ ನೆಪದಲ್ಲಿ ತಿಂಗಳಿಗೆ ಸರಿಯಾಗಿ ವೇತನ ಕೊಡದೇ ದುಡಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಕೂಡಲೇ ಸಮಸ್ಯೆಗೆ ಸ್ಪಂದಿಸದಿದ್ದರೆ, ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿಕೊಂಡು ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಸಂಘದ ಪದಾಧಿಕಾರಿಗಳಾದ ಎಚ್.ಪದ್ಮಾ, ನರ್ಮದಾ, ರಂಗಮ್ಮ ಅನ್ವರ್, ವರಲಕ್ಷ್ಮೀ, ರಹೆಮತ್, ಆದಿಲಕ್ಷ್ಮೀ. ಆಸ್ಮಾ, ಕೃಷ್ಣವೇಣಿ, ನಾಗಮ್ಮ, ರೇಖಾ, ಭಾಗ್ಯಲಕ್ಷ್ಮೀ , ಗೋಕರಮ್ಮ, ಡಿ.ಎಸ್.ಶರಣಬಸವ ಮತ್ತಿತರರು ಇದ್ದರು.