ರಾಯಚೂರು: ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸಗೊಳಿಸಿ ಅವಮಾನ ಮಾಡುತ್ತಿರುವ ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು.ಎಂಇಎಸ್ ಹಾಗೂ ಶಿವಸೇನೆಯನ್ನು ರಾಜ್ಯದಲ್ಲಿ ನಿಷೇಧಗೊಳಿಸಬೇಕು ಎಂದು ಜಿಲ್ಲಾ ಕುರುಬರ ಸಂಘ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈಚೆಗೆ ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ಸಂಗೊಳ್ಳಿ ರಾಯಣ್ಣನ ಪುತ್ಥಳಿ ಧ್ವಂಸಗೊಳಿಸಿದ್ದು ಖಂಡನೀಯ. ರಾಜ್ಯದಲ್ಲಿಯೇ ಇದ್ದರೂ ಜನ, ನೆಲ ಭಾಷೆಯ ವಿಚಾರದಲ್ಲಿ ಕೆಣಕಿ ಕನ್ನಡಿಗರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ನಾಡದ್ರೋಹಿ ಸಂಘಟನೆಗಳನ್ನು ನಿಷೇಧಿಸಿ ಸ್ವಾತಂತ್ರ್ಯ ನಾಯಕರನ್ನು ಅವಮಾನ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಧ್ವಂಸಗೊಳಿಸಿದ ರಾಯಣ್ಣನ ಪ್ರತಿಮೆ ಮರುನಿರ್ಮಾಣ ಮಾಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಕೆ.ಬಸವಂತಪ್ಪ, ಕಾರ್ಯಾಧ್ಯಕ್ಷ ಬಿ.ಬಸವರಾಜ, ಕೆ.ವೇಣುಗೋಪಾಲ, ರಾಮನಗೌಡ ಮರ್ಚೆಟ್ಹಾಳ, ನಾಗರಾಜ ಮಡ್ಡಿಪೇಟೆ, ಜಂಬನಗೌಡ, ನರಸಣ್ಣ ಶಾಸ್ತ್ರಿ, ಗಂಗಪ್ಪ ಇದ್ದರು.
ಗಡಿಪಾರು ಮಾಡಲು ಒತ್ತಾಯ: ಬೆಳಗಾವಿ ಜಿಲ್ಲೆಯ ಕೋಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಬೆಂಕಿ ಹಚ್ಚಿ ಸುಟ್ಟಿರುವ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ವಿರೂಪಗೊಳಿಸಿದ ಎಂಇಎಸ್ ಶಿವಸೇನೆ, ರಾಮಸೇನೆಯ ಮುಖಂಡರನ್ನು ಬಂಧಿಸಿ ರಾಜ್ಯ ದ್ರೋಹ ಪ್ರಕರಣ ದಾಖಲಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಆನಂದ ಏಗನೂರು, ಜಿ.ರಾಜು, ಶಾಂತಕುಮಾರ, ನರಸಿಂಹಲು, ಸುರೇಶ ಇದ್ದರು.