ರಾಯಚೂರು: ಕಳ್ಳತನಕ್ಕೆ ಬಂದಿದ್ದ ಮೂವರು ಕಳ್ಳರನ್ನು ಬೆನ್ನಟ್ಟಿದ ಗ್ರಾಮಸ್ಥರು ಒಬ್ಬ ಕಳ್ಳನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಮೀನಗಡದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಆಳಂದದಿಂದ ಬಂದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದು, ಹೆಚ್ಚಿನ ವಿವರ ಗೊತ್ತಾಗಿಲ್ಲ. ಆರೋಪಿಯನ್ನು ಸೆರೆಹಿಡಿದು ಹಗ್ಗದಿಂದ ಎರಡು ಕೈಗಳ್ಳನ್ನು ಬಿಗಿದು, ಜನರು ಮಾಹಿತಿ ಪಡೆಯಲು ಯತ್ನಿಸಿದರೂ ವಿವರ ಹೇಳಿಲ್ಲ. ಆನಂತರ ಪೊಲೀಸ್ ಠಾಣೆಗೆ ಕರೆತಂದು ಒಪ್ಪಿಸಲಾಗಿದೆ.
'ಪೊಲೀಸ್ ಠಾಣೆಗೆ ದೂರವಾಣಿ ಕರೆಮಾಡಿ ವಿಷಯ ತಿಳಿಸಿದರೂ ಸಮರ್ಪಕ ಪ್ರತಿಕ್ರಿಯೆ ನೀಡಿಲ್ಲ. ಚಳಿ ಇರುವುದರಿಂದ ಈಗ ಬರಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದರಿಂದ ಆರೋಪಿಯನ್ನು ಕವಿತಾಳ ಠಾಣೆಗೆ ಒಪ್ಪಿಸಲಾಗಿದೆ' ಎಂದು ಗ್ರಾಮಸ್ಥರು ತಿಳಿಸಿದ್ದಾರೆ.