ರಾಯಚೂರು: ಒಂದೇ ನಾಣ್ಯದ ಎರಡು ಮುಖಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಸೋಲಿಸಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ ಹೇಳಿದರು.
ನಗರದ ನವೋದಯ ಆಸ್ಪತ್ರೆಯ ಎದುರುಗಡೆ ಬುಧವಾರ ನಡೆದ ಎಸ್ಯುಸಿಐ ಅಭ್ಯರ್ಥಿ ಕೆ.ಸೋಮಶೇಖರ ಪರವಾದ ಬೀಬಿಬದಿ ಸಭೆಯಲ್ಲಿ ಮಾತನಾಡಿದರು.
72 ವರ್ಷಗಳಿಂದ ಗೆದ್ದಿರುವ ಪಕ್ಷಗಳು ಜನರಿಗಾಗಿ ಏನು ಮಾಡಿವೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ಬೆಲೆ ಏರಿಕೆ, ನಿರುದ್ಯೋಗ, ರೈತರ ಆತ್ಮಹತ್ಯೆ ನಿಲ್ಲಿಸಲು ತಡೆಯಲು ಸಾಧ್ಯವಾಗಿಲ್ಲ. ಆದರೆ, ದೇಶದ ಕೆಲವರೇ ಸಂಪತ್ತು ಕೊಳ್ಳೆಯೊಡೆಯುತ್ತಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಮಾತ್ರ ರಕ್ಷಕರು ಎಂಬಂತೆ ಪ್ರಚಾರ ನಡೆಯುತ್ತಿದೆ. ಯಾರೇ ಪ್ರಧಾನಿಯಾದರೂ ಜನರ ಬದುಕು ಬದಲಾಗುವುದಿಲ್ಲ. ಮೂರನೇ ರಂಗದ ಅಸ್ತಿತ್ವ ಇಲ್ಲದಂತೆ ಮಾಡುವ ಹುನ್ನಾರ ನಡೆದಿದ್ದು, ಪ್ರಜಾತಂತ್ರ ವಿರೋಧಿಯ ಕ್ರಮವಾಗಿದೆ. ವಿರೋಧ ಪಕ್ಷಗಳ ನಾಶಪಡಿಸುವ ಪ್ರವೃತ್ತಿ ಖಂಡನೀಯ ಎಂದರು.
ಸದಸ್ಯ ಎನ್.ಎಸ್.ವೀರೇಶ್ ಮಾತನಾಡಿ, ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ದೇಶದ ಪ್ರಧಾನಿ ಯಾರಾಗುತ್ತಾರೆ ಎನ್ನುವುದೇ ಮುಖ್ಯವಾಗಿದೆ. ಜನರ ಸಮಸ್ಯೆಗಳನ್ನು ಮರೆ ಮಾಚಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಚನ್ನಬಸವ ಜಾನೇಕಲ್ ಮಾತನಾಡಿ, ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತುವ ಅಭ್ಯರ್ಥಿಗೆ ಮತ ನೀಡಬೇಕು ಎಂದು ತಿಳಿಸಿದರು.
ಎಂ.ರಾಮಣ್ಣ, ಮಹೇಶ ಚೀಕಲಪರ್ವಿ, ಚೇತನಾ ಬನಾರೆ ಇದ್ದರು. ಮಾವಿನಕೆರೆ ಉದ್ಯಾನ ಮತ್ತು ಸ್ಟೇಷನ್ ರಸ್ತೆಯ ಸಾರ್ವಜನಿಕ ಉದ್ಯಾನದಲ್ಲಿ ಬೆಳಿಗ್ಗೆ ವಾಯು ವಿಹಾರಿಗಳಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡಲು ಕೋರಲಾಯಿತು.