ರಾಯಚೂರು: ಕಾಲಕಾಲಕ್ಕೆ ಮಹಿಳೆಯ ಸ್ಥಾನಮಾನಗಳು ಬದಲಾಗುತ್ತಾ ಬಂದಿವೆ. ಸಮಸ್ಯೆಗಳ ಜೊತೆ ಸಾಧನೆಯ ಮೆಟ್ಟಿಲು ಹತ್ತುವ ಧೃಡ ನಿಲುವು, ಆತ್ಮವಿಶ್ವಾಸ ಮಹಿಳೆಯರಲ್ಲಿರುವುದು ಸಂತಸ ತಂದಿದೆ ಎಂದು ಸಾಹಿತಿ ರುದ್ರಮ್ಮ ಹೇಳಿದರು.
ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಹಾಗೂ ಸಿರಿಗನ್ನಡ ವೇದಿಕೆ ಮಹಿಳಾ ಜಿಲ್ಲಾ ಘಟಕ ಮತ್ತು ಕನ್ನಡ ಜಾನಪದ ಪರಿಷತ್ತು ರಾಯಚೂರು, ಸಿರಿಗನ್ನಡ ವೇದಿಕೆ ಮಹಿಳಾ ತಾಲ್ಲೂಕು ಘಟಕದಿಂದ ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಮಹಿಳಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ತನ್ನ ಸಮಾನತೆಗಾಗಿ ಹೋರಾಟ ಮಾಡುತ್ತಾ ಬಂದಿದ್ದಾಳೆ. ಅದರ ಜೊತೆಗೆ ಪುರುಷ ಕೂಡ ಬೆಂಬಲವಾಗಿ ನಿಂತಿದ್ದಾನೆ. ಹಾಗಾಗಿ ಮಹಿಳೆಯರು ಇಂದು ಬಹು ಎತ್ತರ ಸ್ಥಾನಗಳಿಗೆ ಹೋಗಲಿಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ರಾಜಶ್ರೀ ಕಲ್ಲೂರಕರ್ ಮಾತನಾಡಿ, ಸಮಾನತೆ ಪರಿಕಲ್ಪನೆಯಲ್ಲಿ ಮಹಿಳೆ ತುಂಬಾ ಮುಂದೆ ಬಂದಿದ್ದಾಳೆ. ಹಿಂದಿನ ಮಹಿಳೆಗೂ ಈಗಿನ ಮಹಿಳೆಗೂ ತುಂಬಾ ವ್ಯತ್ಯಾಸ ಇದೆ. ವಿದ್ಯೆಯಿಲ್ಲದ ಮಹಿಳೆ ಈಗ ವಿದ್ಯಾವಂತಳಾಗಿ ಪ್ರಜ್ಞಾವಂತೆಯಾಗಿ ಸಮಾಜದ ಎಲ್ಲಾ ರಂಗಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾಳೆ ಎಂದು ಹೇಳಿದರು.
ಸಾಧಕ ಮಹಿಳೆಯರ ಜೊತೆಗೆ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ವಾಚಿಸಿದ ಅತ್ಯದ್ಭುತ ಕವನಗಳನ್ನು ಮತ್ತು ಅವರ ಸಾಹಿತ್ಯ ಅಭಿರುಚಿಯನ್ನು ಕೊಂಡಾಡಿದರು.
ಉದ್ಘಾಟಕರ ಸಾಹಿತ್ಯ ಸಾಧನೆಯನ್ನು ಡಾ. ಸರ್ವಮಂಗಳ ಸಕ್ರಿ ವೇದಿಕೆಗೆ ಪರಿಚಯಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರ ಸಾಧನೆಯನ್ನು ಭಾರತಿ ಕುಲಕರ್ಣಿ ಪರಿಚಯಿಸಿದರೆ, ರಂಗಣ್ಣ ಪಾಟೀಲ ಅಳ್ಳುಂಡಿ ಅವರ ಸಾಧನೆಯನ್ನು ವೆಂಕಟೇಶ ಬೇವಿನಬೆಂಚಿ ಪರಿಚಯಿಸಿದರು. ರೇಖಾ ಪಾಟೀಲ ಅವರ ಸಾಧನೆಯನ್ನು ರೂಪಾ ಕುಲಕರ್ಣಿ ಪರಿಚಯಿಸಿದರು. ರೇಷ್ಮಾ ಇವರ ಸೇವಾ ಸಾಧನೆಯನ್ನು ಯಶೋಧಾ ಪರಿಚಯಿಸಿದರೆ, 16 ಚಿನ್ನದ ಪದಕಗಳನ್ನು ಪಡೆದಿರುವ ಬುಶ್ರಾ ಮತೀನ್ ಅವರ ಸೇವೆ ಹಾಗೂ ಸಾಧನೆಯನ್ನು ಶಿಕ್ಷಕಿ ವಿಜಯಲಕ್ಷ್ಮಿ ಪರಿಚಯಿಸಿದರು. ಇವರೆಲ್ಲರ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಮಹಿಳಾ ಕವಿಗೋಷ್ಠಿಯಲ್ಲಿ ಸುಮಾರು 25 ಹಿರಿಯ ಮತ್ತು ಕಿರಿಯ ಕವಿಯಿತ್ರಿಯರು ಭಾಗವಹಿಸಿ ಕವನ ವಾಚಿಸಿದರು. ಎಲ್ಲ ಕವಿಯಿತ್ರಿಯರಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪ್ರತಿಭಾ ಗೋನಾಳ ಪ್ರಾರ್ಥಿಸಿದರು . ಶೀಲಾಕುಮಾರಿ ದಾಸ ಸ್ವಾಗತಿಸಿದರು. ಲಲಿತಾ ಡಾ. ಎಂ ಬಸನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಪಾಟೀಲ ನಿರೂಪಿಸಿದರು. ವಿದ್ಯಾವತಿ ಕವಿಗೋಷ್ಠಿಯ ನಿರೂಪಣೆ ಮಾಡಿದರು. ದಾನಮ್ಮ ಸುಭಾಶ್ಚಂದ್ರ ವಂದಿಸಿದರು.
ತಾಲ್ಲೂಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾವುತರಾವ್ ಬರೂರ, ಆಂಜನೇಯ ಕಾವಲಿ, ರುದ್ರಯ್ಯ ಗುಣಾರಿ, ದೇವೇಂದ್ರ ಕಟ್ಟಿಮನಿ, ಸುಗುಣಾ, ವಿಜಯಲಕ್ಷ್ಮಿ, ರೂಪಾ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.