ಸಿಂಧನೂರು: ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ಎಲ್ಲರೂ ಪ್ರತಿನಿತ್ಯ ಯೋಗ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಯೋಗಗುರು ಯೋಗಶ್ರೀ ಮಲ್ಲಣ್ಣ ಸಲಹೆ ನೀಡಿದರು.
ಸ್ಥಳೀಯ ಪಾಟೀಲ್ ಮಹಿಳಾ ಪದವಿ ಕಾಲೇಜಿನಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ‘ಯುವಜನತೆಗಾಗಿ ಯೋಗ’ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಟ್ಟದ ಕೌಂಟ್ ಡೌನ್ ಐವೈಡಿ-2022 ಯೋಗ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯೋಗವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ನಮ್ಮಲ್ಲಿ ಕಾಣಿಸಿಕೊಳ್ಳುವ ಹಲವು ರೋಗಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು. ಆಧುನಿಕ ಒತ್ತಡದ ಬದುಕಿನಲ್ಲಿ ಬಹುತೇಕರಿಗೆ ಜೀವನವೇ ಸಾಕು ಎಂಬ ಭಾವ ಮೂಡುತ್ತಿದೆ. ಯೋಗ ಈ ಎಲ್ಲ ಒತ್ತಡಗಳನ್ನು ತಡೆದು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ರೋಗ ಮುಕ್ತ, ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯವಶ್ಯಕವಾಗಿದೆ’ ಎಂದು ಹೇಳಿದರು.
ಕಲ್ಯಾಣ ಸಿಂಧು ಅಸೋಸಿಯೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ವಲ್ಕಂದಿನ್ನಿ ಮಾತನಾಡಿ, ‘ವಿಶ್ವದ ಹಲವು ರಾಷ್ಟ್ರಗಳು ಯೋಗದ ಮೊರೆ ಹೋಗಿವೆ. ಇದು ದೇಹವನ್ನು ಸಮತೂಕದಲ್ಲಿ ಇರಿಸುತ್ತದೆ. ಶಾಂತಿ ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ಮಾರ್ಗವಾಗಿದೆ’ ಎಂದರು.
ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರಾದೇಶಿಕ ನಿರ್ದೇಶನಾಲಯ ರಾಷ್ಟ್ರೀಯ ಸೇವಾ ಯೋಜನೆ, ಪಾಟೀಲ್ ಮಹಿಳಾ ಪದವಿ ಮಹಾವಿದ್ಯಾಲಯ ಮತ್ತು ಕಲ್ಯಾಣ ಸಿಂಧು ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ವಿವಿಧ ಆಸನಗಳನ್ನು ವಿದ್ಯಾರ್ಥಿನಿಯರಿಗೆ ತೋರಿಸಿಕೊಟ್ಟ ಯೋಗಗುರು ಮಲ್ಲಣ್ಣ ಅವರನ್ನು ಸನ್ಮಾನಿಸಲಾಯಿತು.
ಪಾಟೀಲ್ ಶಿಕ್ಷಣ ಸಂಸ್ಥೆಯ ಅಭಿವೃದ್ದಿ ಅಧಿಕಾರಿ ಕೆ.ಶರಣಬಸವ ವಕೀಲ ಮಾತನಾಡಿದರು.
ಕಲ್ಯಾಣ ಸಿಂಧು ಅಸೋಸಿಯೇಶನ್ ಕಾರ್ಯದರ್ಶಿ ಜಗದೀಶ, ಪಾಟೀಲ್ ಮಹಿಳಾ ಪದವಿ ಮಹಾವಿದ್ಯಾಲಯದ ಕಾರ್ಯದರ್ಶಿ ಆರ್.ಸಿ.ಪಾಟೀಲ್, ಪ್ರಾಚಾರ್ಯ ಆನಂದ ಪುರೋಹಿತ್, ಮುಖ್ಯಶಿಕ್ಷಕಿ ಭಾರತಿ ಕೃಷ್ಣ ಹಾಗೂ ಉಪನ್ಯಾಸಕರು ಇದ್ದರು.