ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಹಲಸಿನ ಹಣ್ಣುಗಳ ಸುಗ್ಗಿ ಆರಂಭವಾಗಿದೆ. ನಗರದ ಟಿ.ಬಿ ವೃತ್ತದ ಬೆಂಗಳೂರು – ಹಿಂದೂಪುರ ಹೆದ್ದಾರಿ ಬದಿಯಲ್ಲಿ ರಾಶಿ ರಾಶಿ ಹಲಸಿನ ಹಣ್ಣುಗಳು ಕಾಣುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಸ್ಥಳೀಯರಷ್ಟೇ ಅಲ್ಲದೆ ನೆರೆಯ ಆಂಧ್ರ ಪ್ರದೇಶದಿಂದಲೂ ವ್ಯಾಪಾರಸ್ಥರು ಇಲ್ಲಿಗೆ ಬರುವುದು ವಿಶೇಷವಾಗಿದೆ.
ಈ ಬಾರಿ ಸಾಧಾರಣವಾಗಿ ಮಳೆ ಆಗಿರುವುದರಿಂದ ಹಲಸು ಇಳುವರಿಗೆ ಸಹಾಯಕವಾಗಿ ಸ್ವಾದಿಷ್ಟ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ದೊಡ್ಡ ಗಾತ್ರದ ಹಲಸಿನ ಹಣ್ಣುಗಳು ₹100ರಿಂದ ₹150 ಗಳವರೆಗೆ ಮಾರಾಟ ಆಗುತ್ತಿವೆ.
ನಗರದ ವಿವಿಧೆಡೆ ದಿನ ನಿತ್ಯ ನೂರಾರು ಹಲಸಿನ ಹಣ್ಣುಗಳ ಮಾರಾಟ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿರುವ ಹಲಸಿನ ತಳಿಗಳಲ್ಲಿ ಹಳದಿ ಬಣ್ಣ, ಕೆಂಪು ಬಣ್ಣ ತೊಳೆಯ ಹೆಬ್ಬಲಸು, ಬೇರು ಹಲಸು ಮೊದಲಾಗಿ ನಾನಾ ವಿಧದ ಹಣ್ಣು ಮಾರಾಟ ನಡೆಯುತ್ತಿದೆ.
ಗಾತ್ರ, ತಳಿ, ವೈವಿಧ್ಯತೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತಿದೆ. ಚುನಾವಣೆ ಅಂಗವಾಗಿ ಕೆಲಕಾಲ ಮಂದಗತಿಯಲ್ಲಿದ್ದ ಹಲಸಿನ ವ್ಯಾಪಾರ ಇದೀಗ ಚುರುಕುಗೊಂಡಿದೆ. ಆಂಧ್ರಪ್ರದೇಶ ಹಾಗೂ ಸುತ್ತಲಿನ ತಾಲ್ಲೂಕುಗಳಿಂದ ಹಲಸಿನ ಹಣ್ಣುಗನ್ನು ಖರೀದಿಸಲು ಬರುತ್ತಿದ್ದಾರೆ. ಹಲಸು ಬಡವರ ಹಣ್ಣು ಎಂದೇ ಜನಪ್ರಿಯ.
ಮಾವು, ಬಾಳೆ ಹಣ್ಣುಗಳಿಗಿಂತ ಹಲಸು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚು ಲಾಭದಾಯಕ. ಕಾಯಿ ಕೀಳಲು ಕೂಲಿಕಾರರ ಸಮಸ್ಯೆ, ಸಾಗಾಣಿಕೆ ವೆಚ್ಚ ಹೆಚ್ಚು ಇರುವುದರಿಂದ ಲಾಭ ಕಡಿಮೆ ಎಂದು ಕೊನಘಟ್ಟದ ರೈತ ವೆಂಕಟೇಶ್ ಹೇಳಿದರು.