ಮರಳವಾಡಿ (ಕನಕಪುರ): ‘ಸ್ತ್ರೀ ಶಕ್ತಿ ಮಹಿಳಾ ಗುಂಪುಗಳಿಗೆ ಕೊಟ್ಟಿರುವ ಸಾಲವನ್ನು ಗುಂಪಿನ ಸದಸ್ಯರು ಸಕಾಲಕ್ಕೆ ಕಟ್ಟಿ ಮತ್ತೆ ಸಾಲವನ್ನು ಪಡೆಯಬೇಕು’ ಎಂದು ಬನವಾಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ರವಿಕುಮಾರ್ ಹೇಳಿದರು.
ತಾಲ್ಲೂಕಿನ ಮರಳವಾಡಿ ಹೋಬಳಿ ಬನವಾಸಿ ಗ್ರಾಮದಲ್ಲಿ ಬುಧವಾರ ನಡೆದ ಕೃಷಿ ಪತ್ತಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
‘ಹಣಕಾಸು ವ್ಯವಹಾರದಲ್ಲಿ ಪುರುಷರಿಗಿಂತ ಮಹಿಳೆಯರು ಕಟ್ಟುನಿಟ್ಟಾಗಿ, ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಾರೆ. ಆ ಕಾರಣದಿಂದಲೇ ಸೊಸೈಟಿಯು ಸ್ತ್ರೀ ಶಕ್ತಿ ಮಹಿಳಾ ಗುಂಪುಗಳಿಗೆ ₹ 99.95 ಲಕ್ಷ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಕೊಟ್ಟಿದೆ’ ಎಂದು ತಿಳಿಸಿದರು.
’ರೈತರಿಗೆ ಸೊಸೈಟಿಯಿಂದ ಕೊಡಲಾಗಿರುವ ಬಡ್ಡಿ ರಹಿತ ಕೃಷಿ ಅಲ್ಪಾವಧಿ ಸಾಲವನ್ನು ವರ್ಷಕ್ಕೆ ಮುಂಚೆ ಮರುಪಾವತಿಸಬೇಕು. ಇಲ್ಲವಾದಲ್ಲಿ ಸುಸ್ತಿದಾರರಾಗಿ ಶೇ 10ರಷ್ಟು ಬಡ್ಡಿ ಸಹಿತ ಸಾಲ ಕಟ್ಟಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಬನವಾಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಕೆ.ಕೃಷ್ಣಯ್ಯ ಮಾತನಾಡಿ, ‘ಸಂಘದ 2018-19 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿ, 2018-19 ನೇ ಸಾಲಿನಲ್ಲಿ ಸಂಘವು ₹ 2.55 ಲಕ್ಷ ಲಾಭ ಗಳಿಸಿದೆ’ ಎಂದು ತಿಳಿಸಿದರು.
ಬಿಬಿಆರ್ ಅಂಡ್ ಆರ್ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ವಿ.ಕೆ.ಯೋಗೇಶ್ ಸಭೆ ನಡೆಸಿಕೊಟ್ಟರು. ಸಂಘದ ಉಪಾಧ್ಯಕ್ಷ ಚಂದ್ರಯ್ಯ, ನಿರ್ದೇಶಕರಾದ ಟಿ.ಎಚ್.ನಂಜೇಗೌಡ, ಎ.ಎಂ. ಶಿವರಾಜು, ಶಿವಲಿಂಗಯ್ಯ, ಪಿ.ಪ್ರಕಾಶ್, ಎಂ.ನಾಗರಾಜು, ಮಲ್ಲಮ್ಮ, ದೇವಮ್ಮ, ಗುಮಾಸ್ತರಾದ ರುಕ್ಮಿಣಿ, ಸಂಪಂಗಿಗೌಡ ಇದ್ದರು.