ರಾಮನಗರ: ತಾಲ್ಲೂಕಿನ ಬೊಮ್ಮಚ್ಚನಹಳ್ಳಿಯ ಅಂಬೇಡ್ಕರ್ ಭವನ ಕಟ್ಟಡದಲ್ಲಿ ಪ್ರಾರಂಭಿಸಿರುವ ಹಿರಿಯ ನಾಗರಿಕರ ವಿಶ್ರಾಂತಿ ಮತ್ತು ವಿಕಸನ ಕೇಂದ್ರ ರಾಜ್ಯದಲ್ಲೇ ಮಾದರಿಯಾಗಿದೆ ಎಂದು ಬಮೂಲ್ ನಿರ್ದೇಶಕ ಪಿ. ನಾಗರಾಜು ಹೇಳಿದರು.
ಬೊಮ್ಮಚ್ಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಿರಿಯ ನಾಗರಿಕರ ವಿಶ್ರಾಂತಿ ಮತ್ತು ವಿಕಸನ ಕೇಂದ್ರಕ್ಕೆ ಬಮೂಲ್ ಕಲ್ಯಾಣ ಟ್ರಸ್ಟ್ನಿಂದ ನೀಡಿದ ಸಾಮಗ್ರಿಗಳ ಮೊತ್ತದ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸರ್ಕಾರದಲ್ಲಿ ಲಭ್ಯವಿರುವ ಹಣಕಾಸು ಸೌಲಭ್ಯ ಬಳಸಿಕೊಂಡು ಸ್ಥಳೀಯ ಗ್ರಾ.ಪಂ.ಗಳ ಮೂಲಕ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಸಮುದಾಯ ಭವನ, ಅಂಬೇಡ್ಕರ್ ಭವನಗಳು ಪ್ರತಿ ನಿತ್ಯ ಗ್ರಾಮದ ಜನರಿಗೆ ಸಾಂಸ್ಕೃತಿಕ, ಶೈಕ್ಷಣಿಕವಾಗಿ ಉಪಯೋಗಗೊಂಡಾಗ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ ಎಂದರು.
ಬಮೂಲ್ ಕಲ್ಯಾಣ ಟ್ರಸ್ಟ್ನಿಂದ ಹಿರಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರಕ್ಕೆ ಆಸನಗಳು, ಟಿ.ವಿ. ಕೇರಂ ಬೋರ್ಡ್, ಚೆಸ್ ಬೋರ್ಡ್, ಎಲೆಸ್ಟ್ರಿಕ್ ಸ್ಟೌ, ಅಲ್ಮೇರಾ ಮುಂತಾದ ಸಾಮಗ್ರಿಗಳನ್ನು ನೀಡಲಾಗಿದೆ. ಇಂತಹ ಕೇಂದ್ರಗಳು ಒಂದೇ ಗ್ರಾಮಕ್ಕೆ ಸೀಮಿತವಾಗಬಾರದು. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ರೀತಿಯ ಕೇಂದ್ರಗಳು ಉದಯವಾಗಬೇಕು. ಇಂತಹ ಕೇಂದ್ರಗಳಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳು, ಬಮೂಲ್ ಕಲ್ಯಾಣ ಟ್ರಸ್ಟ್ ನೆರವು ನೀಡಲಿದೆ ಎಂದು ತಿಳಿಸಿದರು.
ಸುಗ್ಗನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸಿ. ರಾಮಯ್ಯ, ಚಿನ್ನಗಿರಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ವಿ. ಗೀತಾ, ಬಮೂಲ್ ಉಪ ವ್ಯವಸ್ಥಾಪಕ ಜಿ.ಟಿ. ಗಣೇಶ್, ಮುಖಂಡ ಮಲ್ಲೇಶ್, ಪಿಡಿಒ ಸುರೇಶ್, ಬಮೂಲ್ ವಿಸ್ತರಣಾಧಿಕಾರಿ ಕುಮಾರ್, ಗ್ರಾ.ಪಂ. ಸದಸ್ಯ ಮೂರ್ತಿ ಇದ್ದರು.