ಚನ್ನಪಟ್ಟಣ: ‘ಸ್ವಾಮಿ ವಿವೇಕಾನಂದರು ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಸಂತ’ ಎಂದು ಡಿವೈಎಸ್ಪಿ ರಮೇಶ್ ಹೇಳಿದರು.
ನಗರದ ಮಂಗಳವಾರಪೇಟೆ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ವಿವೇಕಾನಂದರ ವಿಚಾರಗಳು ಪ್ರಸ್ತುತ ಯುವಜನಾಂಗಕ್ಕೆ ಅವಶ್ಯಕವಾಗಿವೆ ಎಂದು ಹೇಳಿದರು.
ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಜಿ.ಕೆ. ರಂಗನಾಥ ಮಾತನಾಡಿ, ಅಮೆರಿಕದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮೇಳನದಲ್ಲಿ ಇಡೀ ವಿಶ್ವಕ್ಕೆ ಹಿಂದೂ ಧರ್ಮದ ವಿಚಾರಧಾರೆಗಳನ್ನು ತಿಳಿಸುವ ಮೂಲಕ ಎಲ್ಲಾ ಧರ್ಮಗಳು ಹಿಂದೂ ಧರ್ಮದ ಅಡಿಯಲ್ಲಿ ನಿಲ್ಲುತ್ತವೆ ಎಂದು ತಿಳಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಮಾನವೀಯ ಮೌಲ್ಯಗಳ ಜೊತೆಗೆ ಸಮಗ್ರ ಏಕತೆಯ ಚಿಂತನಾ ಸಿದ್ಧಾಂತವನ್ನು ವಿಶ್ವಕ್ಕೆ ಬೋಧಿಸಿ ಯುವಜನತೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶ ಬದುಕು ಇಡೀ ವಿಶ್ವಕ್ಕೆ ದಾರಿದೀಪವಾಗಿದೆ ಎಂದು ತಿಳಿಸಿದರು.
ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಈ. ಬಸವರಾಜು ಮಾತನಾಡಿ, ರಾಷ್ಟ್ರದ ಸಮಗ್ರತೆ, ಏಕತೆ, ರಾಷ್ಟ್ರೀಯ ಭಾವೈಕ್ಯದ ಮಹತ್ವವನ್ನು ವಿಶ್ವಕ್ಕೆ ಸಾರಿದ್ದಾರೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪುಟ್ಟೇಗೌಡ, ಶಿಕ್ಷಕರಾದ ಎಸ್. ತಿಮ್ಮರಾಜು, ಅನುಸೂಯ, ಬಿ. ಸುನೀತಾ, ಎಸ್. ಭವ್ಯಶ್ರೀ, ಈರಾ ನಾಯಕ್, ಎಸ್. ಲಕ್ಷ್ಮಿ, ರೇಣುಕಮ್ಮ, ಶಾರದಮ್ಮ, ರಾಜಮ್ಮ, ಲೀಲಾವತಿ, ಸಂಧ್ಯಾ, ರಶ್ಮಿ, ಭಾರತಿ, ನಜ್ಮಾ ಉಪಸ್ಥಿತರಿದ್ದರು.