ಕನಕಪುರ: ಬಸವನ ಬನ್ನಿಕುಪ್ಪೆ ಗ್ರಾಮದ ಹೇಮಂತ್ ಎಸ್.ಗೌಡ 19ವರ್ಷದೊಳಗಿನ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಗಳಿಸಿದ್ದಾನೆ.
ಗ್ರಾಮದ ಬಿ.ಕೆ.ಶಿವನಂಜಯ್ಯ ಮತ್ತು ಎಂ.ರಾಧಾ ದಂಪತಿ ಪುತ್ರ ಹೇಮಂತ್, ಜೈನ್ ವಿದ್ಯಾಸಂಸ್ಥೆ ಜೆಪಿಎಸ್ನಲ್ಲಿ 9ನೇ ತರಗತಿ ಓದುತ್ತಿದ್ದಾನೆ.
6ನೇ ತರಗತಿಯಲ್ಲಿದ್ದಾಗಲೇ ಕಬಡ್ಡಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಹೇಮಂತ್, ದೈಹಿಕ ಶಿಕ್ಷಣ ಶಿಕ್ಷಕ ಬಾಬು ಅವರ ಬಳಿ ತರಬೇತಿ ಪಡೆದು ನಂತರ ಬೆಂಗಳೂರಿನ ಸಂಯುಕ್ತ ಭಾರತೀಯ ಕೇಲ್ ಫೌಂಡೇಷನ್ ಕಬಡ್ಡಿ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದ.
ಕೋಚ್ ಉಮಾಪತಿ ಮಾರ್ಗದರ್ಶನದಲ್ಲಿ ಅಲ್ಲಿ ತರಬೇತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ. ಜೂನ್ನಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ. ಅಕ್ಟೋಬರ್ನಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲೂ ಗೆದ್ದು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ. ನ.7ರಿಂದ 10ರವರೆಗೆ ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಶ್ರೀಲಂಕಾ ತಂಡದ ವಿರುದ್ಧ ಗೆಲುವು ಸಾಧಿಸಿ ಪ್ರಥಮಸ್ಥಾನ ಗಳಿಸಿದ್ದಾನೆ.
ತಾಲ್ಲೂಕಿನಿಂದ ಅಂತರರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗಿ ದೇಶಕ್ಕೆ ಕೀರ್ತಿ ತಂದಿರುವ ಹೇಮಂತ್ ಸಾಧನೆಯನ್ನು ಶಾಸಕ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಅಭಿನಂಧಿಸಿದ್ದಾರೆ.