ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆನ್ಲೈನ್ ಜೂಮ್ ಆ್ಯಪ್ ಮೂಲಕ ಪೋಷಣಾ ಸುಭದ್ರತೆಗಾಗಿ ಪೌಷ್ಟಿಕ ಕೈತೋಟ ಕುರಿತು ತರಬೇತಿ ನಡೆಯಿತು.
ಕೆವಿಕೆ ವಿಜ್ಞಾನಿ ಲತಾ ಆರ್. ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ ಜನರು ಅಪೌಷ್ಟಿಕತೆ ಹಾಗೂ ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಆರೋಗ್ಯಕರ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು.
ಆಹಾರವೇ ಔಷಧಿಯಾಗಬೇಕು. ಉತ್ತಮ ಆರೋಗ್ಯಕ್ಕಾಗಿ ಸಮತೋಲನ ಆಹಾರ ಅವಶ್ಯಕ. ಅದರಲ್ಲಿ ಹಣ್ಣು, ತರಕಾರಿಗಳು ದಿನನಿತ್ಯದ ಅವಿಭಾಜ್ಯ ಅಂಗವಾಗಿವೆ. ಇವುಗಳ ಸೇವನೆಯು ಊಟದಲ್ಲಿ ವೈವಿಧ್ಯತೆ ನೀಡುವುದರ ಜೊತೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಸಲಹೆ ನೀಡಿದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಮತ್ತು ಪೋಷಣಾ ವಿಭಾಗದ ಪ್ರಾಧ್ಯಾಪಕಿ ಉಷಾ ರವೀಂದ್ರ ಮಾತನಾಡಿ, ದಿನನಿತ್ಯ ತಾಜಾ ಹಾಗೂ ವಿಷಮುಕ್ತ ಹಣ್ಣು, ತರಕಾರಿಗಳ ಲಭ್ಯತೆಗಾಗಿ ಕೈತೋಟ ಮಾಡಿಕೊಳ್ಳುವುದು ಸೂಕ್ತ ಎಂದು ತಿಳಿಸಿದರು.