ಕನಕಪುರ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಒಂದು ಕಾಯ್ದೆಯಾಗಿದ್ದು ಬಳಕೆ ಮಾಡುವ ಪ್ರತಿ ಹಣಕ್ಕೂ ಲೆಕ್ಕದ ಜತೆಗೆ ಸಮಗ್ರ ದಾಖಲೆ ಒದಗಿಸಬೇಕಿದೆ ಎಂದು ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಮರಳೇಬೇಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ 2019-20ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ವರದಿ ಮಂಡಿಸಿ ಮಾತನಾಡಿದರು.
ಆಡಿಟ್ ವರದಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡು ಬಂದಿದ್ದು ಸರಿಪಡಿಸಿಕೊಳ್ಳಬೇಕು. ಇಲ್ಲವೇ ಹಣ ವಾಪಸ್ ಪಡೆಯಬೇಕೆಂದು ಸಭೆಗೆ ತಿಳಿಸಿದರು.
ಆರು ತಿಂಗಳ ಅವಧಿಯಲ್ಲಿ ಒಟ್ಟು 169 ಕಾಮಗಾರಿ ಮಾಡಲಾಗಿದೆ. ಅವುಗಳಲ್ಲಿ ₹77,23,381 ಕೂಲಿ ವೆಚ್ಚ, ₹ 4,79,704 ಸಾಮಗ್ರಿ ವೆಚ್ಚ ಬಳಕೆ ಮಾಡಲಾಗಿದೆ. ಪ್ರಮುಖವಾಗಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣ ಮಾಡಲಾಗಿದೆ. ಉಳಿದಂತೆ ವೈಯಕ್ತಿಕ ಕಾಮಗಾರಿ, ಸಮುದಾಯ ಕಾಮಗಾರಿ ಮಾಡಲಾಗಿದೆ ಎಂದು ವಿವರಿಸಿದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಸಿ.ಕುಮಾರ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆ ನಿರ್ಣಯಗಳನ್ನು ದಾಖಲೀಕರಿಸಿ ವರದಿ ಸಿದ್ಧಪಡಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಲುವರಾಜು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಸಲಹೆ ಸೂಚನೆ ಪಡೆದು ಕಾಮಗಾರಿಯಲ್ಲಿ ಆಗಿರುವ ಸಣ್ಣಪುಟ್ಟ ಲೋಪ ಸರಿಪಡಿಸುವುದಾಗಿ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ನಾಗು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷ ವೆಂಕಟೇಶ್ ಸೇರಿದಂತೆ ಪಂಚಾಯಿತಿ ಎಲ್ಲಾ ಸದಸ್ಯರು, ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಸಭೆಯಲ್ಲಿ ಇದ್ದರು.