ಚನ್ನಪಟ್ಟಣ: ಮದ್ಯವಸನಿಗಳು ಮತ್ತು ಯುವಜನತೆಯನ್ನು ದುಷ್ಟಚಟಗಳಿಂದ ಮುಕ್ತಗೊಳಿಸಿ ನವಜೀವನದತ್ತ ಕರೆದೊಯ್ಯುವ ಸಲುವಾಗಿ ಮದ್ಯವರ್ಜನ ಸಂಕಲ್ಪ ಶಿಬಿರ ನಡೆಸಲಾಗುವುದು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕಣ್ಣಯ್ಯ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದಲ್ಲಿ ನಡೆದ ಜಿಲ್ಲಾ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಂಕಲ್ಪದಂತೆ ಪರಿವರ್ತನೆಯ ಮೂಲಕ ಸುಸ್ಥಿರ, ಸುಸಂಸ್ಕೃತ ಆರೋಗ್ಯವಂತ ಸಮಾಜ ನಿರ್ಮಿಸಲು ನಾವೆಲ್ಲರೂ ಅವರೊಂದಿಗೆ ಸಹಕರಿಸಬೇಕಿದೆ. ಮದ್ಯವರ್ಜನೆ ಶಿಬಿರ ನಡೆಸುವ ಮೂಲಕ ಪಾನಮುಕ್ತ ಸಮಾಜ ನಿರ್ಮಿಸಲು ಶ್ರಮಿಸೋಣ’ ಎಂದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ ಮಾತನಾಡಿ, ಹೆಗ್ಗಡೆ ಅವರು ನಿರಂತರವಾಗಿ ಬಡವರನ್ನು ಮುಖ್ಯವಾಹಿನಿಗೆ ತರವು ಪ್ರಯತ್ನ ಮಾಡುತ್ತಿದ್ದಾರೆ. ಸಂಸ್ಕಾರ ನೀಡುವ ಮೂಲಕ ಸುಸ್ಥಿರ ಸಮಾಜ ನಿರ್ಮಿಸಿ, ಆರ್ಥಿಕವಾಗಿ ಶಿಸ್ತು ತರುವ ಮೂಲಕ ಬಡವರ ಬಾಳಿನಲ್ಲಿ ಬೆಳಕು ತರುವುದು ಧರ್ಮಾಧಿಕಾರಿಗಳ ಉದ್ದೇಶವಾಗಿದೆ ಎಂದು ಹೇಳಿದರು.
ನವಜೀವನ ಸೇವಾ ಸಮಿತಿ ರಚಿಸುವ ಮೂಲಕ ಯುವಕರಿಗೆ ಸ್ವ ಉದ್ಯೋಗ ನೀಡಿ, ಸಣ್ಣಕೈಗಾರಿಕಾ ಸ್ಥಾಪಿಸಲು ಧನಸಹಾಯ ನೀಡಿ, ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು. ಪಾನಮುಕ್ತ ಸಮಾಜ ನಿರ್ಮಿಸಲು ಸ್ವಾಸ್ಥ್ಯ ಕ್ಲಬ್ ರಚಿಸಿ, ಮದ್ಯಪಾನ ಬಿಟ್ಟವರಿಗೆ ಸನ್ಮಾನ ಮಾಡಲಾಗುವುದು ಎಂದರು.
ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಯೋಜನೆಯ ಸದಸ್ಯರು ಇದ್ದರು.