ರಾಮನಗರ: ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಸಮತಾ ಸೈನಿಕ ದಳದ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಹೇಳಿದರು.
ನಗರದ ಐಜೂರು ವೃತ್ತದಲ್ಲಿ ಸಮತಾ ಸೈನಿಕ ದಳದ ವತಿಯಿಂದ ಬುಧವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಂಡನ್ನಲ್ಲಿ ರಸ್ತೆಯೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ ಜಯಂತಿ ಆಚರಣೆಯಾಗುತ್ತದೆ. ಮತ್ತೊಂದು ರಾಷ್ಟ್ರದಲ್ಲಿ 4 ಎಕರೆ ಪ್ರದೇಶದಲ್ಲಿ ಅವರ ಹೆಸರಿನಲ್ಲೊಂದು ಗ್ರಂಥಾಲಯ ಸ್ಥಾಪನೆಯಾಗುತ್ತಿದೆ. ಅವರೊಂದು ಜ್ಞಾನದ ಭಂಡಾರ, ಭಾರತ ರಾಷ್ಟ್ರಪ್ರೇಮಿ, ಇಂತಹ ಮೇರು ವ್ಯಕ್ತಿತ್ವವನ್ನು ಭಾರತದಲ್ಲಿ ಮನುವಾದಿಗಳು ಜಾತಿಯ ಕಣ್ಣಿನಲ್ಲಿ ನೋಡುವುದು ಸರಿಯಲ್ಲ ಎಂದರು.
ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಎಲ್ಲ ನಾಗರಿಕರಿಗೂ ಸಮಾನತೆಗೆ ಒತ್ತು ನೀಡಿದ್ದರು. ಅವರು ಕೇವಲ ಸಂವಿಧಾನವನ್ನು ಮಾತ್ರ ನೀಡಲಿಲ್ಲ. ಆಧುನಿಕ ಭಾರತದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಹೀಗಾಗಿಯೇ ಅವರು ಆಧುನಿಕ ಭಾರತದ ಪಿತಾಮಹ ಎಂದು ಹೇಳಿದರು.
ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ ಶಿಕ್ಷಣ, ಸಂಘಟನೆ, ಹೋರಾಟ ಎಂಬುದು ಅಂಬೇಡ್ಕರ್ ಜೀವನದ ಸಿದ್ಧಾಂತವಾಗಿತ್ತು. ಶಿಕ್ಷಣವೇ ಶಕ್ತಿ ಎಂಬುದನ್ನು ಅವರು ಪ್ರತಿಪಾದಿಸಿದ್ದರು ಎಂದರು.
ಕಲಾವಿದರು ಪಟ ಕುಣಿತ ಪ್ರದರ್ಶನ ನೀಡಿದರು. ಶಿವಲಿಂಗಯ್ಯ, ಚೆಲುವರಾಜು, ಲಕ್ಷ್ಮಣ್, ಹೇಮಂತ್, ಚಂದ್ರು, ಪುರುಷೋತ್ತಮ, ಕಲ್ಬಾಳು ಗೋವಿಂದ, ಪುನೀತ್, ವೆಂಕಟೇಶ್, ಮುತ್ತಣ್ಣ, ಶ್ರೀನಿವಾಸ್, ಕೀರ್ತಿರಾಜ್ ಇದ್ದರು.