ರಾಮನಗರ: ಇಲ್ಲಿನ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕೂಟಗಲ್ ಕ್ಷೇತ್ರದ ಸದಸ್ಯ ಎಚ್.ಎನ್. ಅಶೋಕ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಜಿ.ಪಂ. ಸಭಾಂಗಣದಲ್ಲಿ ಬೆಳಗ್ಗೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಚ್.ಎನ್. ಅಶೋಕ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾದ ಪ್ರಾದೇಶಿಕ ಆಯುಕ್ತ ನವೀನರಾಜ್ ಸಿಂಗ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. 22 ಸದಸ್ಯರ ಪೈಕಿ 20 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಶೋಕ್ ರಾಮನಗರ ತಾಲ್ಲೂಕಿನ ಕೂಟಗಲ್ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದು, ಸದ್ಯ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಮುಂದಿನ ಮೇನಲ್ಲಿ ಜಿ.ಪಂ. ಸದಸ್ಯರ ಆಡಳಿತಾವಧಿ ಮುಗಿಯಲಿದ್ದು. ಅಲ್ಲಿಯರೆಗೂ ಇವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಈ ಸಂದರ್ಭ ಅಶೋಕ್ ಪತ್ರಕರ್ತರ ಜೊತೆ ಮಾತನಾಡಿ ‘ಇದೊಂದು ಉತ್ತಮ ಅವಕಾಶವಾಗಿದ್ದು, ಇದನ್ನು ಬಳಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು. ‘ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿದೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಸಿಕ್ಕಿರುವ ಅಲ್ಪ ಅವಧಿಯಲ್ಲಿಯೇ ಅನೇಕ ಹೊಸ ಯೋಜನೆಗಳನ್ನು ರೂಪಿಸುವ ಕನಸು ಹೊತ್ತಿದ್ದೇನೆ’ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ರವಿ, ಜಿ.ಪಂ. ಉಪಾಧ್ಯಕ್ಷೆ ಉಷಾ ರವಿ, ನಿರ್ಗಮಿತ ಅಧ್ಯಕ್ಷ ಬಸಪ್ಪ, ಸದಸ್ಯರಾದ ದಿವ್ಯಾ ಗಂಗಾಧರ್, ಜಿ.ಡಿ. ವೀಣಾ ಚಂದ್ರು, ಎನ್. ಸುಗುಣ, ತಿಮ್ಮಪ್ಪರಾಜು, ಭಾಗ್ಯ, ಎಸ್.ಗಂಗಾಧರ್, ಪ್ರಸನ್ನಕುಮಾರ್, ಜಯರತ್ನ ರಾಜೇಂದ್ರ ಮತ್ತಿತ ರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.